Friday, February 27, 2026

ಶ್ರೀ - ಅಪ್ಪಿ ಕಥಾ ಪ್ರಸಂಗ ೨

 ಶ್ರೀ ಹಾಗೂ ಅಪ್ಪಿ ಕಾಲೇಜು ದಿನಗಳಿಂದ ಗೆಳೆಯರು. ಇಬ್ಬರಿಗೂ ಒಂದೇ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು ಆಕಸ್ಮಿಕವೇ ಸರಿ. ಕೆಲಸ ಮುಗಿದ ಮೇಲೆ ಇಬ್ಬರೂ ಒಂದೇ ಗಾಡಿಯಲ್ಲಿ ಕೂತು ಮನೆಗೆ ಹೋಗುವ ರೂಢಿ, ಇಬ್ಬರೂ ನೆರೆಹೊರೆ ಕೂಡಾ ಹೌದು. 

ಮದುವೆಯಾಗಿ, ಮಕ್ಕಳಾಗಿ, ಮಕ್ಕಳು ಶಾಲೆಗೆ ಹೋಗುವುದಕ್ಕೆ ಪ್ರಾರಂಭಿಸಿದರೂ ಇವರ ದಿನಚರಿಯಲ್ಲಿ ಒಂಚೂರು ಬದಲಾವಣೆಯಾಗಿದ್ದು ನಾ ಕಾಣೆ. ಇಬ್ಬರ ಮನೆ ದೋಸೆ ತೂತಾದರೂ, ಎಲ್ಲಿ ಎಷ್ಟು ತೂತುಗಳಿವೆ ಎಂದು ಪರಸ್ಪರರಿಗೆ ಗೊತ್ತಾಗುವಷ್ಟು ಗಾಢ ಗೆಳೆತನ ಇವರದ್ದು. ಎಲ್ಲವೂ ಸರಿ ಆದರೆ ಶ್ರೀ ಪಕ್ಕಾ ನಾಸ್ತಿಕ, ಅಪ್ಪಿ ಹೇಳಿಕೊಳ್ಳುವಂಥ ಅಸ್ಥಿಕನಲ್ಲದಿದ್ದರೂ, ಸಂಕಟ ಬಂದಾಗ ವೆಂಕಟರಮಣ ಅನ್ನುವಷ್ಟಾದರೂ ಭಕ್ತಿ ಇದೆ. ಭಕ್ತಿಗಿಂತ ಭಯವೇ ಜಾಸ್ತಿ ಅನ್ನಿ.

ಎಂದಿನಂತೆ ಅಂದು ಸಂಜೆ ಕಂಪನಿಯ ಕೆಲಸ ಮುಗಿಸಿ ಅವರ ಮಾಮೂಲಿ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಬಾದಾಮಿ ಹಾಲು, ಒಂದು ಉಸ್ಮಾನಿಯಾ ಬಿಸ್ಕೆಟ್ ಸವಿಯುತ್ತಿರುವಾಗ ಅಪ್ಪಿಯ ಮುಖ ಸಪ್ಪಗಿರುವುದನ್ನ ಕಂಡ ಶ್ರೀ "ಯಾಕಲೇ, ಏನಾತು." ಎಂದು ಕೇಳಿದ.

"ನಾಳೆ ಮಹಾಶಿವರಾತ್ರಿ".

"ಅದಕ್ಕ?".

"ಬೆಳಿಗ್ಗೆ ನೀಲಾ ಹೇಳ್ತಿದ್ಲು, ಬರೋಮುಂದ ಒಂದು ಕಲ್ಲಂಗಡಿ ಹಣ್ಣು, ಒಂದು ಕರಬೂಜ, ಒಂದು ಡಜನ್ ಬಾಳೆ ಹಣ್ಣು, ಕಬ್ಬು, ಕೋಬರಿ, ದ್ರಾಕ್ಷಿ ಹಣ್ಣು, ತೆಳ್ಳಗಿನ ಅವಲಕ್ಕಿ, ಉಪ್ಪಿಟ್ಟು ರವಾ ಎಲ್ಲಾ ತೊಗೊಂಬರ್ರಿ, ನಾಳೆ ಎಲ್ಲಾರೂ ಉಪವಾಸ ಮಾಡೋದದ  ಅಂತ".

"ಅಷ್ಟ ಹೌದಲ್ಲ, ನೀನ್ ಹೆಂಡ್ತಿ ಹೇಳ್ಯಾಳ ಅಂದ್ರ ತೊಗೊಂಡು ಹೋಗು, ಗಾಡಿನ ರಸವಂತೀ ಹಣ್ಣಿನ ಅಂಗಡಿ ಹತ್ರ ನಿಲ್ಲಸ್ತೇನಿ".

"ಅದು ಮಾಡಿದ್ರಾಯ್ತು, ನನ್ನ ಮಗ ಉಡಾಳ ಗಿರಿ, ಅಪ್ಪ ಉಪವಾಸ ಯಾಕ ಮಾಡಬೇಕು ಶಿವರಾತ್ರಿ ಗೆ ಅಂತ ಕೇಳಿದ".

"ಶಬ್ಭಾಷ್, I like this "ಯಾಕ" questioning mindset".

"ಈಗ ಆಫೀಸ್ ಗೆ ಲೇಟ್ ಆಗ್ಲಿಕತ್ತದ , ಬಂದು ಹೇಳ್ತೀನಿ" ಅಂದು ಹೆಂಗೋ ತಪ್ಪಿಸಿಕೊಂಡೆ.

"ಮುಂದ".

"ಮುಂದ ಅಂದ್ರ ಎನ್ಲೆ, ಈಗ ಹೋದ್ರ ಸಾವಿರ questions ಇರ್ತಾವು ಅವಂದು, ಅವಂಗೆ answers ಹೇಳಿದ ಮ್ಯಾಲೆ ಅವಾ ನನ್ನ ಬಿಡೋದು, ಜೀವಂತ".

"ಹೌದು, ಯಾಕ ಉಪವಾಸ ಅಂತ ಒಂದು concept ಅದ ನಮಗ?".

"ಯಾಕಂದ್ರ, ಶಿವರಾತ್ರಿಗೆ ಅಷ್ಟ ಅಲ್ಲ, ಸಂಕಷ್ಟಿ, ಏಕಾದಶಿ, ಚತುಷ್ಟಿ ಅಂತ ಬಾಳ ದಿನಾ ಉಪವಾಸ ಇರ್ತೇವಿ. ದಿನಾ ಗಂಟಲು ಪೂರ್ತಿ ಮೂರು ಹೊತ್ತು ತಿಂದು ನಮ್ಮ ಜೀರ್ಣಾಂಗ ವ್ಯವಸ್ಥೆ ಹದಗೆಟ್ಟಿರ್ಥತಿ, ಅದಕ್ಕ ಸ್ವಲ್ಪರ ಅವಾಗಾವಾಗ ವಿಶ್ರಾಂತಿ ಸಿಗಲಿ ಅಂತ ಮಾಡಿರ್ತಾರ ಹಿರಿಯರು ".

" ಹಂಗಾದ್ರ, ಆರೋಗ್ಯದ ದೃಷ್ಟಿಯಿಂದ ಉಪವಾಸ ಮಾಡ್ಯಾರ ಅಂತಿ?". 

"ಶಿವನಿಗೆ ಈ ಆಡಂಬರ, ವೈಭವ ಎಲ್ಲಾ ಹಿಡ್ಸಂಗಿಲ್ಲ. ಎಲ್ಲಾ ಬಿಟ್ಟು ಬೂದಿ ಬಳಕೊಂಡು ಸ್ಮಶಾನದೊಳಾಗ ಇರೋ ದೇವರಿಗೆ ಒಂದು ದಿನ ಉಪವಾಸ ಇರೋದು ತಪ್ಪಲ್ಲ ಅಲ್ವಾ? ಅಷ್ಟ ಅಲ್ಲಪಾ, ಶಿವರಾತ್ರಿಯ ರಾತ್ರಿ ಬ್ರಹ್ಮಾಂಡದಲ್ಲಿ ಶಕ್ತಿಯ ಪ್ರವಾಹ ಉಚ್ಛ ಮಟ್ಟಕ್ಕೆ ಏರಿರುತ್ತ, ನಾವು ದ್ಯಾನದಲ್ಲಿದ್ರೆ ನಮ್ಮೊಳಗಿನ ಆಧ್ಯಾತ್ಮಿಕ ಮನಸ್ಸಿಗೆ ಆ ಶಕ್ತಿಯ ಪ್ರಭಾವದ ಅನುಭವ ಆಗ್ತದ ಅಂತ ನಮ್ಮಜ್ಜ ಹೇಳಿದ ನೆನಪು ನಾವು ಸಣ್ಣೋರಿರೋಬೇಕಿದ್ರ".

"So, ಶಿವ ಎಲ್ಲಾ ತ್ಯಜಿಸಾನ ಅಂತ ನೀ ಊಟ ಮಾಡದಂಗ ಉಪವಾಸ ಮಾಡೋದು, ನಿದ್ದಿ ಮಾಡಲಾರದ ಜಾಗರಣಿ ಮಾಡೋದು?".

"ಅಷ್ಟ ಅಲ್ಲೇನು?".

" ಮುಸ್ತಫಾ ರೋಜಾ ಮಾಡೋದು, ದೇವಾಲೋಗನಾಥನ್ ಈಸ್ಟರ್ ಗೆ Lent period ಅಂತ ಮಾಡೋದು, ಅದು ಏನು ?".

"ಅದು ಅವರಿಗೆ ಗೊತ್ತಿರುತ್ತ, ನಂಗ ಕೇಳಿದ್ರ ನಾ ಎನ್ ಹೇಳ್ಲಿ?".

" ಯಾವ ದೇವ್ರು ಉಪವಾಸ ಮಾಡ್ರಿ, ಕುರಿ ಕೋಳಿನ ಕಡಿರಿ, ಬರೀ ಅವಲಕ್ಕಿ ಉಪ್ಪಿಟ್ಟು, ಸಾಭುದಾನ ವಡಿ ತಿಂದು ದಿನಾ ಎಲ್ಲಾ ಕಳಿರಿ  ಅಂತ ಹೇಳಿಲ್ಲಲ್ಲಾ?".

" ಹೋಗಿ ಹೋಗಿ ನೀನ್ ಹತ್ರ ದೇವ್ರು, ಹಬ್ಬ ಅಂತ ಹೇಳಿದ್ನಲ್ಲ, ನಂಗ ಬುದ್ದಿ ಇಲ್ಲಾ ಬಿಡು. ನೀ ಒಬ್ಬ ನಾಸ್ತಿಕ ಅಂತ ಮತ್ತ prove ಮಾಡಿದಿ ನೋಡು ಇವತ್ತು. ಹಂಗಾರ ಈ ದಿನ ಯಾಕ ಉಪವಾಸ ಮಾಡಬೇಕು ಅಂತೀರಿ ಶ್ರೀಮಾನ್ ಶ್ರೀ ಅವರೇ".

"ನಂಗೂ ಗೊತ್ತಿಲ್ಲಾ, ಆದ್ರ ಏನಿರ್ಬಹುದು ಅನ್ನೋ ಕುತೂಹಲ ಐತಿ, thanks to your son Giri."

"ನಮಗ ಊಟದ ಬೆಲೆ ಗೊತ್ತಾಗಲಿ ಅಂತ ಏನಾದ್ರೂ ನಮ್ಮ ಹಿರಿಯರು ಈ ಆಚರಣೆ ಜಾರಿಗೆ ಮಾಡಿದ್ರಾ ?".

"ನನಗನ್ನಿಸೋದು, ಹಸಿವಿನ ಅನುಭವ ಆಗಲಿ ಎಲ್ಲಾರಿಗೂ ಅಂತ ".

"ಹಸಿವಿನ ಅನುಭವ ಎಲ್ಲಾರಿಗೂ ಒಂದಲ್ಲಾ ಒಂದು ಹೊತ್ತಲ್ಲಿ ಆಗಿರ್ತದ, ಅಲ್ಲಾ?".

"ಒಂದು ದಿನ ಪೂರ್ತಿ ಉಪವಾಸ ಇದ್ದು, ಒಂದು ರಾತ್ರಿ ಇಡೀ ನಿದ್ದಿಗೆಟ್ರ ಏನೆಲ್ಲಾ ಆಗ್ತದ, ನಮ್ಮ ವಿಚಾರಗಳು ಎಷ್ಟು ಬದಲಾಗ್ತವ, ನಮ್ಮ ದಿನಚರಿ ಎಷ್ಟೆಲ್ಲ ಪರಿಣಾಮ ಆಗ್ತದ ಅಂತ ".

" ಹಂಗ ಮಾಡಿದ್ರ ನಮಗೇನು ಬಂತು ಲಾಭ ?".

"ಹಂಗ ಮಾಡಿದ್ರ ನಂಗ ಅನ್ನಿಸೋದು ನಮ್ಮ ಅನುಭವಕ್ಕ ಬರ್ತದ ಈ ಊಟದ ಮತ್ತು ನಿದ್ದಿಯ ಮಹತ್ವ. ಯಾರು ಊಟ ಇಲ್ದಂಗ ಇರ್ತಾರಲ್ಲ ಅವರಿಗೆ ನಾವು ಮನಸಾಪೂರ್ವಕ ಧಾನ ಮಾಡ್ತೇವಿ. ದಯೆಯಿಂದ ಧಾನ ಮಾಡ್ತೇವಿ".

"ಇದು ಯಾಕೋ ಅಸಮಂಜಸ ಅನ್ನಿಸ್ತದ, ಅಲ್ಲೋ ದೋಸ್ತ, ಧಾನ ಮಾಡ್ಲಿಕ್ಕೆ ಉಪವಾಸ ಇರಲಿಕ್ಕೆ ಬೇಕೇನು? ಉಪವಾಸ ಇಲ್ದಂಗ ಇನ್ನೊಬ್ಬನಿಗೆ ಊಟ ಹಾಕಿದ್ರ ಅದು ಅವನ ಹೊಟ್ಟಿ ತುಂಬಸಂಗಿಲ್ಲ?".

"ಧಾನ ಅನ್ನೋದು ಅವನಿಗೆ ಒಳ್ಳೆದಾಗಲಿ ಅಂತ ಮಾಡ್ತಾರೇನೋ ಹುಚ್ಚಪ್ಪ, ಅದು  ಧಾನಿಗೂ ಒಳ್ಳೆದು ಮಾಡೋದು. ಆ ಧಾನಿಗೆ, ನಾ ಧಾನ ಮಾಡಿದ್ನಲ್ಲ ಅನ್ನೋ ಅಹಂ ಅವನಿಗೆ ಬರದಂಗಿರಲಿ, ಅವನ ಮನಸ್ಸಿನೊಳಗ ದಯೆ ತುಂಬಿಕೊಂಡಿರಲಿ ಅಂತ ಹಿರಿಯರು ಇಂಥಾ ಒಂದು ಆಚರಣೆ ಮಾಡಿರಬಹುದು, ಅಷ್ಟಿಲ್ದ ಹೇಳ್ಯಾರೇನು ಬಸವಣ್ಣೋರು, ದಯೆಯೇ ಧರ್ಮದ ಮೂಲವಯ್ಯ, ದಯೆ ಬೇಕು ಸಕಲ ... ".

" ಹೇ, ಹೇ ಹೇ, ದೋಸ್ತ ನಿಲ್ಲಿಸು. ಸೂರ್ಯ ಆಗಲೇ ಮುಳುಗ್ಲಿಕತ್ತಾ, ನನ್ನ ಹೆಂಡ್ತಿ ಹೇಳಿದ್ದೆಲ್ಲ ತೊಗೊಂಡು ಹೋಗಬೇಕು, ಇಲ್ಲಾಂದ್ರ ನನ್ನ ಚಂಡ ತಗಿತ್ತಾಳಕಿ . ನನ್ನ ಮಗನಿಗೆ ನಾ ಬೇಟೆಗಾರ ಬಿಲ್ವ ಮರ ಹತ್ತಿ ಆ ದಿನ ಉಪವಾಸ ಇದ್ದು, ರಾತ್ರಿ ಪೂರ್ತಿ ಜಾಗರಣಿ ಮಾಡಿ, ಬಿಲ್ವ ಎಲೆಗಳನ್ನ ಒಂದೊಂದ ಕಿತ್ಕೊಂತ ಕೆಳಗ ಹಾಕಿದ್ದು, ಅವೆಲ್ಲ ಮರದ ಕೆಳಗಿದ್ದ ಶಿವಲಿಂಗದ ಮೇಲೆ ಬಿದ್ದು ಶಿವ ಪ್ರಸನ್ನ ಆಗಿ ಆ ಬೇಟೆಗಾರ ಮೋಕ್ಷ ಪಡೆದ ಕಥೆ ಹೇಳ್ತೀನಿ ನಡಿಪಾ. ನೀ ಹೇಳಿದ್ದೆಲ್ಲ ಕೇಳಿ ನನ್ ತಲಿ ಮೊಸರು ಗಡಿಗಿ ಆಗೇತಿ ".

############ ಶುಭಂ #############.

ಇಂತಿ,

ಶ್ರೀಅಪ್ಪಿ.


ಕಥೆಯ ಹಿನ್ನಲೆ: 

https://naanoo-mama.blogspot.com/2026/02/blog-post.html

https://naanoo-mama.blogspot.com/2025/10/blog-post.html




Sunday, February 15, 2026

ನಾನೋ, ನನ್ನ ಉಪವಾಸವೋ

 "ಈ ಶಿವರಾತ್ರಿ ಅಂದ್ರ ಏನು? ಈ ಹಬ್ಬದ ವಿಶೇಷತೆ ಏನು ? ನಮ್ಮ ಯಾವ ಹಬ್ಬಗೋಳಾಗ ರಾತ್ರಿ ಅಂಥ ಪದಾನೇ ಬರಂಗಿಲ್ಲ ಅಲ್ವಾ" ಮಗ ಕೇಳಿದ ಪ್ರಶ್ನೆಗೆ ನನ್ನ ಹತ್ತಿರ ಉತ್ತರ ಹುಡುಕೋ ಉದ್ವೇಗಕ್ಕಿಂತ ಇಂಥ ಪ್ರಶ್ನೆ ಕೇಳಿದನಲ್ಲ ಅನ್ನೋ ಹೆಮ್ಮೆ ಆಯ್ತು ನನಗೆ.

"ಶಿವರಾತ್ರಿ ಅಂದ್ರೆ ಶಿವನ ಹಬ್ಬ, ಶಿವಾ ಪಾರ್ವತಿ ಸಮಾಗಮದ, ಶಿವ ತಾಂಡವ ನೃತ್ಯ ಮಾಡಿದ, ಸಮುದ್ರ ಮಂಥನದಲ್ಲಿ ನಂಜನ್ನು ಕುಡಿದ ಶಿವನ ಆರಾಧನೆಯ ರಾತ್ರಿ. ಈ ದಿನಪೂರ್ತಿ ಫಲಾಹಾರ  ಸೇವಿಸಿ, ಉಪವಾಸ ಇದ್ದು, ರಾತ್ರಿಪೂರ್ತಿ ಶಿವನ ನಾಮಸ್ಮರಣೆ, ಭಜನೆಯಲ್ಲಿ ಜಾಗರಣೆ ಮಾಡ್ತೀವಿ" ನಂಗ ಗೊತ್ತಿರುವಷ್ಟು ಎಷ್ಟು ಸರಳ್ ಹೇಳ್ಲಿಕ್ಕೇ ಆಗ್ತದೋ ಹೇಳಿ ಮುಗಿಸಿದೆ.

"ಶಿವನ ಹುಟ್ಟುಹಬ್ಬಾನ, ಮತ್ತ ನೀ ಹೇಳೋಬೇಕಿದ್ರ ಶಿವಾ ಪರಮಾತ್ಮ, ದೈವಗಳ ದೇವ, ಅವರಿಗೆ ಹುಟ್ಟೂ ಇಲ್ಲಾ, ಸಾವೂ ಇಲ್ಲಾ...".  ನನ್ನ ಮಗನ ಪ್ರಶ್ನೆ ಪತ್ರಿಕೆ ಅಷ್ಟಕ್ಕ ಮುಗಿದಿದ್ರೆ ಅವನಿಗೆ ನಾ ಗಿರಿ ಅನ್ನೋ ಬದಲು ಅಕ್ಷಯಪಾತ್ರೆ ಅಂತಾ ಯಾಕ ಕರಿಬೇಕಿತ್ತು.

ಇನ್ನೂ ಏನೋ ಕೇಳ್ಬೇಕು ಅಂತಿದ್ದವನಿಗೆ ಸ್ನಾನ ಮಾಡ್ಕೊಂಬಾ ಅಂಥ ದಬಾಯಿಸಿ ಕಳಿಸಿದೆ, 

" ಅಪ್ಪ, ನಾ ಇವತ್ತ ಟಬ್ ನಾಗ ಸ್ನಾನ ಮಾಡಲಿ" . 

 " ಹೂಂ, ತಲಿ ಸ್ನಾನ ಮಾಡು, ಚೋಲತ್ನಾಗ ಶಾಂಪೂ ಹಚ್ಕೋ ".

 ಅವಾ ಕುಣಿದಾಡಿಕೊಂತ ಸ್ನಾನಕ್ಕ ಅಂಥ ಹೊಂಟ, ತಟ್ಟಂಥ ನಾ ChatGPT ಶರಣ ಹೋದೆ.ನನಗ ಗೊತ್ತು ನಾ ಹಾಕಿದ್ದು ಅಲ್ಪವಿರಾಮ, ಅವಾ ಸ್ನಾನ ಮಾಡಿ ಬಂದು ತಕ್ಷಣ ಅವನ ಪ್ರಶ್ನಾ ಉಗಿಬಂಡಿಗೆ ಮತ್ತ ಸ್ವಲ್ಪ ಇದ್ದಿಲು ಹಾಕ್ಕೊಂಡು ಬಂದು ನನ್ನ ಪಕ್ಕಾ ಕೂತ್ಕೊಳುತ್ತ ಅಂತ. ಇವತ್ತು ಶಿವ ಸ್ತುತಿ ಜಪಿಸೋ ಮೊದಲು ಇವನ ೧೦೦೮ ಕುತೂಹಲಗಳಿಗೆ ನಾನು ಉತ್ತರ ಪತ್ರಿಕೆ ready ಇಟ್ಕೋಬೇಕಿತ್ತು. 

ನನಗ ಇಷ್ಟ ಆಗೋ ಹಬ್ಬಗಳಲ್ಲಿ ಒಂದಾದ ಶಿವರಾತ್ರಿ ಬಗ್ಗೆ,ChatGPT, Google ಹುಡುಕಿ ನನ್ನ ಮಗನಿಗೆ answer ಮಾಡೋ ಅಷ್ಟು ಮಬ್ಬ ಆಗಿ ಬಿಟ್ಟೆ ನಾ. ಇದು ನಂಗ ಸ್ವಲ್ಪ ಖೇದ ಉಂಟು ಮಾಡ್ತು ಆದ್ರೂ ನಾ ಅದರ ಬಗ್ಗೆ ಸ್ವಲ್ಪ ಓದಿಕೊಂಡಿದ್ದು ಖರೇ. 

ಅವಾ ಸ್ನಾನ ಮುಗಿಸ್ಕೊಂಬಂದ, ನಾ ನಸಿಕನಾಗ ಎದ್ದು ಬೆಳಗಿನ ಕೆಲಸ ಎಲ್ಲಾ ಮುಗಿಸಿ ಬಿಸಿ ಬಿಸಿ ನೀರೊಳಗ ಸ್ನಾನ ಮಾಡಿ ಬೆಳಗ್ಗಿನ ಉಗುರುಬೆಚ್ಚಗಿನ ನೀರು ಕುಡುಕೊಂತ ಕುಂತಿದ್ದೆ. ಗಿರಿ ಎದ್ದು ಬಂದು ಇಷ್ಟೆಲ್ಲ ಗಬರಾಡಿಸಿ ಹೋಗಿದ್ದ . ೧೦೦೮ ಶಿವ ಸ್ತುತಿ ಮುಗಿಸಿ ಪೂಜೆ ಮಾಡಿ ಎದ್ದೇಳಲಿಕ್ಕೆ ಸ್ವಲ್ಪ ಸಮಯ ಆಗಿತ್ತಾದರೂ ಗಿರಿ ಹಣೆ ಮೇಲೆ ಒಂದು ಪ್ರಶ್ನೆ ಚಿನ್ಹೆ ಕಾಣಿಸಿ "ಯಾಕ, ಏನಾಯ್ತು" ಅಂದೆ.

""ಓಂ ಅಮುಖಾಯೆ ನಮಃ" ಅಂದ್ಯಲ್ಲ, ಅದರ ಅರ್ಥ ಏನು?"

"ಆಗ್ದಿ ಸರಳ್ ಕನ್ನಡ ಅಲ್ಲೇನೋ, ಮುಖಾ ಇಲ್ದಾವ, faceless".

"ಮತ್ತ ಇಷ್ಟೊತ್ತನ್ನಕ ಶಿವನ  ಫೋಟೋ ಇಟ್ಕೊಂಡು ಪೂಜೆ ಮಾಡದಿ, ಬಿಲ್ಪತ್ರಿ ಹಾಕಿದೀ".

"ಗಿರಿ, ಇವತ್ತು, ಮೊದಲ ಉಪವಾಸ, ಆಮೇಲೆ ಜಾಗರಣಿ ಬೇರೆ, ನಾಳೆ ನೀನವು ಎಲ್ಲಾ queations ಗೂ answer ಮಾಡ್ತೇನಿ, please".

"ಜಳಕ ಮಾಡು ಅಂದೇ, ಮಾಡಿದೆ, ಪೂಜೆಗೆ ಜೊತಿಗೆ ಕುಂದರು ಅಂದೆ, ಕೂತುಕೊಂಡೆ, ಮುಂದ?"

" ಒಂದು ಬಾಳೆ ಹಣ್ಣು, ಹಸುರ್ ಸೇಬು, ಒಂದು ಹೋಳು ಅನಾನಸ್, ಬಟ್ಟಲು ದ್ರಾಕ್ಷಿ ಹಣ್ಣು, ಒಂದೆರಡು ಹೋಳು ಕಲ್ಲಂಗಡಿ ಹಣ್ಣು, ಇದೆಲ್ಲಾ ಒಂದು ಪರಾತದೊಳಗ ಹಾಕಿಟ್ಟೇನಿ, ತೊಗೊಂಬಾರೋ".

"ಅಪ್ಪಾ, ಇದಕ್ಕ ಯಾ ದೇಶದೊಳಾಗ ಉಪವಾಸ ಅಂತಾರ, ಎಷ್ಟರ calories intake ಆಗ್ತದ, ಒಂಚೂರು ಖಬರೈತಿ ನಿಮಗ"

"ಇದು ಫಲಾಹಾರ, ಶಿವರಾತ್ರಿ ಒಳಗ ಇದೆಲ್ಲಾ allowed, ಹೊಟ್ಟೆ ಚೂರು ಚೂರು ಅನ್ಲಿಕತ್ತದ. Please ತೊಗೊಂಬಾರೋ ".

"ನಿಮಗೆಲ್ಲ ನಿರ್ಜಲ ಏಕಾದಶಿನ ಚೊಲೋ, ಅವತ್ತು ಒಂದಿನ ಉಪವಾಸ ಕರೆಕ್ಟ್ ಆಗಿ ಮಾಡ್ತೀರಿ ನೋಡರಿ ನೀವು. ಯಾವ ಯಾವ ಹಬ್ಬದಾಗ ಎನ್ ಮಾಡಬಾರದು ಅದನ್ನ ಎಷ್ಟ ಮಾಡಿದರ ok ok ಅಂತ correct ಆಗಿ ಕೇಳ್ಕೊಂಬಂದು ನಿಮಗ ಎಷ್ಟು ಬೇಕು ಅಷ್ಟು ಮಾಡ್ತೀರಿ, ಅದನ್ನ ಉಪವಾಸ ಅಂತಾ ಬೇರೆ ಕರೀತೀರಿ, ಸ್ವಚ್ಛಾತು ಹೋಗಿರಿ".

ಅವಾ ಹೇಳಿದ್ದು ಖರೇ ಹೌದೋ ಅಲ್ವೋ, ಮನಸ್ಸಿಗೆ ಕಸಿವಿಸಿ ಆಗಿದ್ದಂತೂ ಖರೆ ಖರೆ.

ಪರಾಥ ತಂದೀಟ್ಟವನ ಮುಖದೊಳಗ ಇನ್ನೊಂದು ಪ್ರಶ್ನಾರ್ಥಕ ಚಿನ್ಹೆ ಇತ್ತು, 

"ಈಗಿನಾತು, ಮತ್ಯಾಕ ಮುಖಾ ಗಂಟಿಟ್ಕೊಂಡಿ ಗಿರಿ ".

"ಉಪವಾಸ ಏನೋ ಹಿಂಗ ಮಾಡ್ಲಿಕತ್ತಿರಿ, ಜಾಗರಣೆ ಎನ್ ಮಾಡ್ತೀರಿ", ಅವಾ ಕೇಳಿ ಹಗುರಾಗಿಬಿಟ್ಟ. ಸಂಜಿಕ ೭:೩೦ ಗೆ ಊಟಾ, ೯ ಘಂಟೆಗೆ ನಿದ್ದೆ ಮಾಡೋ ದೇಹಾ ಇವತ್ತು ಜಾಗರಣಿ ಹೆಂಗ ಮಾಡ್ತತಿ ಅಂದುಕೊಂಡಿರಬೇಕು ಅವಾ.

"ಪಕ್ಕದ ಮನಿ ಸತೀಶ್ ಸರ್ ಗೆ ಸಾಯಂಕಾಲ ಬರ್ಲಿಕ್ಕೆ ಹೇಳೇನಿ, ಒಂಚೂರು ಹರಟೆ ಹೊಡದು, ಹಾವು ಏಣಿ, ಚದುರಂಗ, ಏಳು ಮನಿ ಚಕ್ಕಾಟ ಆಡಿ, ಆಮೇಲೆ ಬೆಳವಡಿ ಮಲ್ಲಮ್ಮ, ಸಂಗ್ಯಾ ಬಾಳ್ಯಾ ಸಿನಿಮಾ ನೋಡೋ ಅಷ್ಟೊತ್ತಿಗೆ ಚುಮು ಚುಮು ನಸಿಕಾಗೀರ್ಥತಿ, ದೇವರಿಗೆ ಕೈ ಮುಗಿದು ಮಕ್ಕೊಳೋದು ".

"ಹೋ, ಜಾಗರಣಿ ಅಂದ್ರ ಇಷ್ಟ ಏನೂ? ನಾ ಏನು ಪೂಜೆ, ಭಜನೆ ಇರ್ತವು ಅನ್ಕೊಂಡಿದ್ದೆ ".

" ಹೂಂ, ಅದೂ ಮಾಡ್ಬೋದು, ನಾ ಇದು ಮಾಡಿ ರಾತ್ರಿ ಪೂರ್ತಿ ಎಚ್ಚರ ಇದ್ದು ಮಕ್ಕಂತೇನಿ".

" ಶುದ್ದಾತು, ಚೊಲೋ ಅದ ನಿಮ್ಮ ಶಿವರಾತ್ರಿ".




Monday, October 27, 2025

ಶ್ರೀ - ಅಪ್ಪಿ ಕಥಾ ಪ್ರಸಂಗ ೧

 ಶ್ರೀ ಮತ್ತೇ ಅಪ್ಪಿಯರದ್ದು ಸರಿ ಸುಮಾರು ೩೦_೩೫ ವರ್ಷಗಳ ಹಳೆಯ ಸಂಬಂಧ. ಪುಟಗೋಸಿ ಗೆಳಯರಲ್ಲದೆ ಹೋದರೂ ಗಳಸ್ಯ ಕಂಠಸ್ಯ ಸ್ನೇಹಿತರು. ಬೆಳೆದಿದ್ದು ಬೇರೆ ಬೇರೆ ಪರಿಸರವಾದರೂ ಇಬ್ಬರ ಪ್ರಕೃತಿ, ಪ್ರವೃತ್ತಿ, ಹವ್ಯಾಸಗಳು ತೀರಾ ಹಾಸು ಹೊಕ್ಕುವಂತಹವೇ. ಬೆಳಿಗ್ಗೆ 9 ಹೊಡೆದರೆ ಸಾಕು, ಅಪ್ಪಿ ಎಂತಹ ಕೆಲಸವಿದ್ದರೂ ಬಿಟ್ಟು ಶ್ರೀ ಮನೆಯ ಬಾಗಿಲಿಗೆ ಹಾಜರು. ರಜೆಯ ಮರುದಿನ ದಿನಪತ್ರಿಕೆ ಬರೋದು ತಪ್ಪಿತೋ ಏನೋ, ಇವರ ಹಾಜರಿ ತಪ್ಪಿದ್ದೇ ಇಲ್ಲ. ಅಪ್ಪಿಗೆ ಶ್ರೀ ಮನೆಯಲ್ಲಿ ಮಾಡೋ ಇಡ್ಲಿ, ತೆಂಗಿನ ಕಾಯಿ ಚಟ್ನಿ ಅಂದರೆ ಪಂಚ ಪ್ರಾಣ. ಅದು ಶ್ರೀ ಮನೆಯ ಎಲ್ಲರಿಗೂ ಗೊತ್ತು ಹಾಗೆಯೇ ಅವರೆಲ್ಲರಿಗೂ ಅಪ್ಪಿ ಮನೆಗೆ ಬಂದರೆಂದರೆ ಬಡಿಸಿ ಅವರ ಮಾತು ಕೇಳುತ್ತಾ ತಿಂಡಿ ತಿನ್ನುವ ಖುಷಿ. ಅಪ್ಪಿ ಗೇಟು ತೆಗೆದು ಮನೆ ಹೊಸ್ತಿಲು ದಾಟಿ ಪಡಸಾಲೆಗೆ ಬಂದರೆ ಶ್ರೀ ಅವನ ಆ ದಿನದ ಮೆಚ್ಚಿನ ಅಂಕಣ ಮುಗಿಸಿ 9 ಘಂಟೆಗೆ ಇವರ ಬರುವಿಕೆಗೆ ಕಾಯುತ್ತಾ ಕೂತಿರುತ್ತಾನೆ. ಅಪ್ಪಿ ಬಂದ ತಕ್ಷಣ, "ಲೇಯ್ , ಇವತ್ತೇನು?"

"ಇಡ್ಲಿ, ತೆಂಗಿನಕಾಯಿ ಚಟ್ನಿ "

" ಒಂದು ಡಬರಿ  ಚಿತ್ರಾನ್ನ, double ommlette"

" ತಂಗಳನ್ನದ ಪುಳಿಯೋಗರೆ, ಒಂದು ಹಿಡಿ ಮೊಸರು ಮೆಣಸಿನಕಾಯಿ"

" ಪುಲಾವು, ಪಚ್ಚಡಿ "

" ಟೊಮಾಟೋ ಬಾತ್, ಮೆಣಸಿನಕಾಯಿ ಬಜ್ಜಿ ".

ದಿನಕ್ಕೊಂದು ಅಡುಗೆ, ನಂಚಿಕೊಳ್ಳಲು ಏನೋ ಒಂದು ಬೇಕೇ ಬೇಕು, ಇಬ್ಬರಿಗೂ. ಮೊಸರನ್ನಕ್ಕೆ ನಿಂಬೆ ಹಣ್ಣಿನ ಉಪ್ಪಿನಕಾಯಿಯೇ ಬೇಕು. ಬಿರಿಯಾನಿ ಮಾಡಿದರಂತೂ, ಅಪ್ಪಿ ಬರೀ ಅನ್ನವನ್ನೇ ತಿನ್ನುವ ಗಿರಾಕಿ ಆದರೆ ಅದರ ಜೊತೆ ಬದನೆಕಾಯಿ ಚಾಲನಾ ಇದ್ದರೆ ಅವರ ನಗು ಯಾವ ದಾಸವಾಳದ ಅಗಲಕ್ಕೂ ಸಮನಿಲ್ಲ ಬಿಡಿ. 

ಅದೇನು ನoಟೋ, ಶ್ರೀ ಮತ್ತೇ ಅಪ್ಪಿಯದ್ದು, ಬೆಳಿಗ್ಗೆ ತಿಂಡಿ ತಿಂದು ಹೊರಟರೆಂದರೆ ಸಾಯಂಕಾಲ ಆರು ಘಂಟೆಗೆ ಕಾಫಿಗೆ ಹಾಜರು. ಕಾಫಿ ಅಂದರೆ ಶ್ರೀ ಮನೆಯ ಕಾಫಿ, ನಗು ಮುಖದೊಂದಿಗೆ ಮನೆ ಯಜಮಾನಿ ಶಾರದಮ್ಮ ಕಾಫಿ ಕೊಟ್ಟರೆ ಅಪ್ಪಿಗೆ ಅದೇ ಅಮೃತ. ಕಾಫಿ ಆದಮೇಲೆ ಒಂದು - ಒಂದುವರೆ ತಾಸು ಹರಟೆ ಹೊಡೆಯುತ್ತಾರೆ ಇಬ್ಬರೂ, ಮನೆಯ ಅಂಗಣದ ಕಟ್ಟೆಯ ಮೇಲೆ ಕೂತು. ಇಷ್ಟು ವರ್ಷಗಳ ಕಾಳ, ದಿನವೂ ಅದೇನು ಮಾತಾಡುತ್ತಾರೋ . ಹಾದಿ ಹೋಗುಕರೆಲ್ಲ ತಿರುಗಿ ನೋಡುವಷ್ಟು ಕೆಕ್ಕರಿಸಿ ನಗು ಬೇರೆ ಆವಾಗಾವಾಗ. ಯಾವುದೋ ಬೀದಿಯ ರಸ್ತೆ ಹಿಡಿದು ರಹದಾರಿ ಹೊಕ್ಕು ರಾಜಮಾರ್ಗದಲ್ಲಿ ತೇರು ತೇಲಿಸಿ ಸಮುದ್ರಗಳನ್ನು ದಾಟಿ ಸುರಂಗ ಮಾರ್ಗ ಹೊಕ್ಕು ಪುಷ್ಪಕ ವಿಮಾನವೇರಿ ಎಲ್ಲೆಲ್ಲಿಯೋ ಹೊಗುತ್ತದೆ ಇವರ ವಿಚಾರ ಧಾರೆಗಳು.ಒಂದೊಂದು ಸಲವಂತೂ ವಿಚಾರ ವಿನಿಮಯ ವಾದವಾಗಿ, ವಾದ ಜಗಳವಾಗಿ, ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಹೋಗಿದ್ದು ಉಂಟು. ನಾಳೆಯಿಂದ ಅಪ್ಪಿ, ಶ್ರೀ ಮನೆಗೆ ಬರುವುದಿಲ್ಲವೇನೋ ಅನ್ನುವಷ್ಟು. 

ಮರುದಿನ ೯ ಘಂಟೆಗೆ "ಲೇಯ್ , ಇವತ್ತೇನು?".


ಆವತ್ತು ಕಾರ್ತಿಕ ಸೋಮಾರ  ಇರ್ಬಕು , ಎಂದಿನಂತೆ ಅಪ್ಪಿ ೯ ಘಂಟೆಗೆ ಹಾಜರು. ಶುಭ್ರವಾಗಿ ಶ್ಯಾವಿಗಿ ಉಪ್ಪಿಟ್ಟು, ಖಾರದ ಚಟ್ನಿ ಮಾಡಿ ಟೇಬಲ್ ಮೇಲಿಟ್ಟಿದ್ದರು ಶಾರದಮ್ಮ. ಕಾರ್ತಿಕ ಮಾಸದಲ್ಲಿ ಶಾರದಮ್ಮನವರಿಗೆ ಅವರೆಕಾಳು ಹೆಂಗ್ ಸಿಗ್ತಾವೋ ಆ ಶಿವಂಗ ಗೊತ್ತು. ಅವರೆಕಾಳು ಹಾಕಿ ಶ್ಯಾವಿಗಿ ಉಪ್ಪಿಟ್ಟು ಮಾಡ್ತಾರ ಶಾರದಮ್ಮನೋರು, ಒಂದು ಸಲಾ ತಿನ್ನಬೇಕು ನೀವು. ಶ್ರೀ ಮತ್ತ ಅಪ್ಪಿ ತಿನ್ನಲಿಕ್ಕೆ ಶುರು ಮಾಡಿದ್ರು, ಅಪ್ಪಿಗೆ ಅಲ್ಲೇ ಓರಣವಾಗಿ ಜೋಡಿಸಿಟ್ಟ ೨ ಬೆಳ್ಳಿ ತಟ್ಟಿ ಕಂಡವು.

"ಹೊಸಾವ ಇವು, ಯಾವಾಗ ತಂದ್ರಿ" ಅಪ್ಪಿ ಕೇಳಿದ.

"ಇಲ್ಲಲೇ, ಹಳೆವು. ಬಾಗಿಲು ಮುಂದ ರಾತ್ರಿ ಯಾರೋ ಬಿಟ್ಟು ಹೋಗಿದ್ರು, ಗಬಕ್ಕನ ಹೋಗಿ ಆಯ್ಕೊಂಡ್ ಬಂದೆ, ಯಾರಿಗೂ ಹೇಳ್ಬೇಡಾ ಮತ್ತ".

"ಒಟ್ಟ, ಒಚ್ಚಿ ಒಗಿಯೋದ ನೋಡ್ ನೀ, ಖರೆ ಹೇಳಲೇ".

" ಕಾರ್ತಿಕ ಸೋಮಾರ, ಇಕಿ ಯಾರೋ ಸ್ವಾಮೆರನ್ನ ಕರದಾಳ ಸಂಜಿ ಬಿನ್ನಕ್ಕ, ಹಂಗಾಗಿ special silver plates ಪಾ".

"ಜೋರಾತಪ, ಒಳ್ಳೆದು. ನಡೀಲಿ, ನಡೀಲಿ".

"ಅಪ್ಪಿ, ನೀನು ಬಂದು ಬಿಡು. ನೀನಿಲ್ದ ಕೈಕಾಲ ಆಡಂಗಿಲ್ಲಾ  ನಂಗ".

" ನೀ ಕರಿ, ಬಿಡು, ನಾ ಬರವ್ನ, ಸ್ವಾಮೇರ್ನ ಕಂಡು ಕಾಲು ಮುಗಿದು ಆಶೀರ್ವಾದ ತೊಗೊಂಡು ಥರಾವರಿ ಅಡುಗಿ ಖಾಲಿ ಮಾಡೇ ಹೋಗೋವ್ನ" ಅಪ್ಪಿ ಮಾತಿಗೆ ಶ್ರೀ ಮತ್ತೆ ಮನೆವರೆಲ್ಲ ನಗುವಿನ ಪಾಲಾದರು.

ಸಂಜೆ ಆತು, ಸ್ವಾಮೇರು ಬಂದ್ರು, ಪೂಜೆ ಸಾಂಘವಾಗಿ ಪೂರ್ತಿ ಆತು. ಊಟಕ್ಕಂತ ಕುಂತ್ರು. ಸ್ವಾಮೇರು, ಶ್ರೀ ಗೆ ಬೆಳ್ಳಿ ತಟ್ಟಿ ಇಟ್ಟರು ಶಾರದಮ್ಮ, ಅಪ್ಪಿಗೂ, ಮಗನಾದ ಗಿರಿಗೂ ಬಾಳೆ ಎಲೆನೂ ಇಟ್ಟರು. ಅಪ್ಪಿ phone ರಿಂಗಣಿಸಿತು. Phone ಮಾತಾಡಿದ ಅಪ್ಪಿ ಎದ್ದು ನಿಂತ. 

ಶ್ರೀ ಗಾಬರಿಯಿಂದ "ಯಾಕ, ಏನಾತು " ಅಂತ ಕೇಳಿದ.

"ಇಲ್ಲ; ನಮ್ಮ ಮುಸ್ತಫಾ ಮನೆಯವರಿಗೆ ಆರೋಗ್ಯದ ಏರುಪೇರು ಅಂತ, ಕಾರು ತೊಗೊಂಡು ಲಗೂನ ಬರ್ರಿ  ಅಂದ್ರು, ಬಹುಶಃ ಉಡುಪಿ ಇಲ್ಲಾಂದ್ರ ಮಣಿಪಾಲ್ ಗೆ ಹೋಗೋದು ಆಗಬಹುದು, ನೀವು ಮುಂದುವರಿಸರಿ. ಶ್ರೀ, ನಾ ಅಲ್ಲಿಗೆನರ ಹೋದ್ರ ಮೂರು ನಾಕು ದಿನಾ ಆದೀತು, ಊರಿಗೆ ಬಂದು ತಕ್ಷಣ ಇಲ್ಲಿಗೆ ಬರ್ತೀನಿ".


ಇವತ್ತಿಗೆ ಸರಿಯಾಗಿ ಒಂದೂವರೆ ವಾರ ಆಯ್ತು ಅಪ್ಪಿ ಹೋಗಿ, ನಿನ್ನೆ ಶ್ರೀ ಗೆ ಕಾಲ್ ಮಾಡಿ ಹೇಳಿದ್ದ, 

"ಎಲ್ಲಾ ಸರಿ ಹೋಗೇತಿ, ಬಾಭಿಜಾನ್ discharge ಆದ್ರ, ರಾತ್ರಿ ಹೊಂಟು ಬೆಳಿಗ್ಗೆ ಅಷ್ಟೊತ್ತಿಗೆ ಬರ್ತೀವಿ".

"ಶಾರದಾ, ನಾಳೆ ಅಪ್ಪಿ ಬರ್ತಾನ, ಇಡ್ಲಿ ಮಾಡ್ಲಿಕ್ಕಾಗ್ತದ?".  ಕೂಗಿ ಕೇಳಿದ್ದ ಶ್ರೀ.

"ಹೂಂ, ಮಾಡಿದ್ರಾತು. ಈಗರ ಚೂರು ನಗರಿಪಾ, ಹ್ಯಾಪ ಮಾರಿ ಹಾಕೊಂಡು ಮೂಲ್ಯಾಗ ಕುಂತೀರಿ ಒಂದು ವಾರದಿಂದ. ನೋಡ್ಲಿಕ್ಕಾಗವಲ್ಡು ನಿಮ್ಮನ್ನ". 

ಶ್ರೀ ಬೆಳಿಗ್ಗೆ ಎದ್ದು ಸ್ನಾನ ಮಾಡಿದವನೇ , ಪೇಪರ್ ಕೂಡಾ ಓದಲಿಲ್ಲ, ೮ ಘಂಟೆಗೆ ಗೇಟ್ ಹತ್ರ ಕಾಯ್ಕೊಂತ ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ, ಓಡಾಟ. 

ಗಡಿಯಾರ ಒಂಬತ್ತು ಘಂಟೆ ತೋರಿಸಿತ್ತು,

 "ಲೇಯ್ , ಇವತ್ತೇನು?". ಅಪ್ಪಿ ಗೇಟ್ ಹತ್ರ ಕೇಳಿದ್ದ. ಶ್ರೀ ಅವನನ್ನ ನೋಡಿದ್ದೇ, ಓಡಿಹೋಗಿ ಗಟ್ಟಿಯಾಗಿ ತಬ್ಬಿಕೊಂಡ. ಅಪ್ಪಿಗೆ ಆಶ್ವರ್ಯ ಆಗಿ "ಏನಾತಲೇ", ಅಂತ ಕೇಳಿದ. ದರದರನೆ ಎಳೆದುಕೊಂಡು ಒಳಗೆ ಕರೆದೊಯ್ದ ಶ್ರೀ.

Dining table ಅಲ್ಲಿ ಎರೆಡು ಬೆಳ್ಳಿ ತಟ್ಟೆಯಲ್ಲಿ, ಬಿಸಿ ಬಿಸಿ ಇಡ್ಲಿ ಇನ್ನೂ ಹೊಗೆಯಾಡತಿದ್ದವು, ಗಟ್ಟಿಚಟ್ನಿಗೆ ಒಗ್ಗರಣೆ ಹಾಕಿ ಮಟ್ಟಸವಾಗಿ ಬಡಿಸಿಟ್ಟಿದ್ರು ಶಾರದಮ್ಮ. 

"ಅಬಾಬಬ್ಬಾ, ಇವತ್ತು ಯಾರ ಸ್ವಾಮೇರು ಬರ್ತಾರಪ್ಪ, special silver plate ಹೊರಾಗ ಬಂದಾವು " ಅಪ್ಪಿ ಕೇಳಿದ.

ಶ್ರೀ ಕಣ್ಣು ತೇವ ಆಗಿದ್ವು, ಗಂಟಲು ಒಣಗಿತ್ತು, " ದೋಸ್ತ, ಯಾರೋ ಸ್ವಾಮೇರ ಬರ್ತಾರಂಧ್ರ ವಿಶೇಷ ಅಂದುಕೊಂಡಿದ್ದೆ, ಈ ಒಂದು ವಾರದೊಳಾಗ ನನಗನಿಸಿದ್ದು, ಎಲ್ಲಾರಗಿಂತಾ ವಿಶೇಷ ನೀನಲೆ.ದಿನಾ ಬರೋ ನೀನು ಒಂದೇ ಒಂದು ದಿನಾ ಬರ್ಲಿಲ್ಲ ಅಂದ್ರ ಮನಸ್ಸು ತತ್ತರಿಸಿ ಹೋತು, ನಿನ್ನಂಥ ದೋಸ್ತ ಒಬ್ಬವಾ ಇದ್ರ ಅವನ ಎಲ್ಲಾರಿಗಿಂತ ವಿಶೇಷ" .


########     ಶುಭಂ      ##########

ಇಂತಿ ನಿಮ್ಮ ಪ್ರೀತಿಯ, 

ಶ್ರೀಅಪ್ಪಿ.



Friday, March 14, 2025

Happy ಹೋಳಿ V/s ಹೋಳಿ ಅದ ಮಗನ

 ಅಪರೂಪಕ್ಕೆ ಮುಂಜಾನೆ ಬೇಗ ಎಚ್ಚರ ಆತು, ಅರ್ಧ ತಾಸು ಮಂಚದಾಗ ಹೊರಳಾಡಿ ಬೇಜಾರಾಗಿ, ವಾಯು ಸಂಚಾರಕ್ಕಂತ(walk) ಹೊರಟೆ. ಗೊತ್ತಲ ನಿಮಗ, ಮುಂಜ್ ಮುಂಜಾನೆ apartment ಒಳಗ school buses ಸಾಲಗ ನಿಂತು ಬಿಟ್ಟಿರ್ಥವು. ಹ್ಯಾಪ ಮೋರಿ ಹಾಕ್ಕೊಂಡು, ಜೊಲ್ಲು ಸುರುಸ್ಕೊಂಡು ಹೋಗೋ ಮಕ್ಕಳೂ ಚಂದ, ಆಗ್ದಿ tip top ready ಆಗಿ ಇಸ್ತ್ರಿ ಬಟ್ಟೆ, ಮುಖದ ಮ್ಯಾಲ ತಟ್ಗಗ ತಟಗು powder ಹಚ್ಚಕೊಂಡು, ತಲಿಗೆ ಎಷ್ಟು ಬೇಕೋ ಅಷ್ಟು ಎಣ್ಣಿ ಹಚ್ಚಿ, ಬೈತಾಲಿ ತಗದು ಬಾಚಿ, ಪಾಲಿಶ್ ಮಾಡಿರೋ shoe ಹಾಕ್ಕೊಂಡು ಹೋಗೋ ಮಕ್ಕಳೂ ಚಂದಾನ. ಮಕ್ಳು ಅಂದಮೇಲೆ ಅವು ಹೆಂಗಿದ್ರು ಚಂದಾನ, ಅಲ್ಲೇನು? (ನಾ first category ಮಗು). ಈ ಗದ್ದಲದೊಳಾಗ, ಮುದ್ದಾದ ಮಗು, ಬಣ್ಣ ಬಣ್ಣದ ಅಂಗಿ ಹಾಕ್ಕೊಂಡು, ಅಕಿಗಿಂತಾನು ಮುದ್ದಾದ ಹೆಜ್ಜೆ ಹಾಕ್ಕೊಂಡು ನಡ್ಕೊಂಬರ್ತಿದ್ಲು. ನನ್ನ ನೋಡದಾಕೆ "ಶ್ರೀಅಪ್ಪಿ, how's my new dress ? Happy Holi uncle" ಅಂಥಾ ನನ್ನ ಅನುಮತಿ ಇಲ್ದೆ ನನ್ನ chubby cheeks ಗೆ ಗುಲಾಬಿ ಬಣ್ಣ ಹಚ್ಚಿ ಹೋಗೆ ಬಿಟ್ಟಳು ಬಸ್ ಹತ್ತಲಿಕ್ಕೆ.


ನನ್ನ ವಾಯುವಿಹಾರ ಮುಗಿದ ಮ್ಯಾಲೆ , ಬಿಸಿಲ ಕಾಯಿಸ್ಕಂತ ampitheatre ಅಲ್ಲಿ ಕೂತಿದ್ದೆ. ನಾ ಸಣ್ಣಾವ ಇದ್ದಾಗ ಹೋಳಿ ಹಬ್ಬ ಹೆಂಗೀತ್ತು ಅಂಥ ವಿಚಾರ ಮಾಡ್ಕೊಂತ ಮನಸ್ಸು ಆ ಕಡೆ ಜಾರಿದ್ದು ನಂಗ ಗೊತ್ತಾಗಲೇ ಇಲ್ಲ.

ಹೋಳಿಗೆ ಇನ್ನೊಂದು ವಾರ ಐತಿ ಅಂದ್ರ ಸಾಕು, ನಮ್ಮವ್ವ ನಮ್ಮ ನಾಕೂ ಜನದ್ದು ಹಳೇ ಅರಬಿ ಹುಡುಕಿಟ್ಟತಿದ್ಲು, ಅವು ಇನ್ನು ನಮಗ ಆಗಿ ಬರಲ್ಲ, ಇನ್ನೊಂದು ಸಲಾ ಸುಮ್ನ ಹಂಗ ನೋಡಿದ್ರ ಸಾಕು ಹರದ ಹೋಗಿ ಬಿಡಬೇಕು ಅಂಥಾ ಅರಬಿ ಅವು. ಸರಿ ಸುಮಾರು ಮೂರು ನಾಕು ವರ್ಷದಿಂದ ಸತತವಾಗಿ ಹಾಕ್ಕೊಂಡು ಉಜ್ಜಾಡಿ ಸಾಕಲೇ ಅಂದು ಬೀರೂ ಸೇರಿದ ಅರಬಿ ಅವು. ಅವನ್ನ ಹೋಳಿ ಆಡಾಕಾಂತಾನ ನಮ್ಮವ್ವ ತಗದು ಇಟ್ಟಿದ್ದು ಅಂಥ ನಮಗ್ ಆವಾಗ ಗೊತ್ತಾಗತಿತ್ತು. ಪಿಚಗಾರಿ ಕೋಡ್ಸು ಅಂಥಾ ಒಂದು ವಾರ ಹಿಂದ ಅಪ್ಪನ್ನ ಕಾಡಿ, ಬೇಡಿ, ಅತ್ತು ಕರ್ದು, ನಾಕ್ ಜನಕ್ಕ ಒಂದು ಪಿಚಾಗಾರಿ ತರಬಹುದು ಅಂಥ ಅನುಮೋದನೆ ಸಿಗ್ತಿತ್ತು. 

ಎಲ್ಲಾ ಹಬ್ಬ ಹುಡಿಗೇರು ಹಬ್ಬ ಅನ್ನಿಸಿ ಬಿಡೋವ, ಅವರಿಗೆ ಹೊಸ dress ಕೊಡಿಸೋದು, ಪೂಜೆ ಪುನಸ್ಕಾರ, ಹಬ್ಬದ ಅಡಿಗಿ ಸಹ  ಎಲ್ಲಾ ಅವರಿಗೆ ಏನ್ ಬೇಕು ಅದು, ಹೆಂಗ್ ಬೇಕೋ ಹಂಗ, ಎಷ್ಟು ಬೇಕಾದ್ರೂ. ಹೋಳಿ ಮಾತ್ರ ಅಗ್ದಿ ಹುಡುಗರ ಹಬ್ಬ ಅನ್ನಿಸೋದು.ಯಾರ್ಯಾರೋ ಮನ್ಯಾಗ ಹಳೇ ಅರಬಿ, ಕುರ್ಚೆ, ಹಲಗಿ, ಹಗ್ಗ ಎನ್ ಕೈಯಗೆ ಸಿಗುತ್ತ್ ಅದು , ಕೇಳಿದಾಗ ಕೊಟ್ರೋ, ಸರಿ, ಇಲ್ಲಾ ತುಡುವು ಮಾಡೋದು, ಕಾಮಪ್ಪನ ಸುಡುಬೇಕಲ. ನಮ್ಮನ್ನ ಯಾರರ ಹಿಡಿದು ಕೇಳಿದ್ರ ಉತ್ತರ ತಯಾರಿತ್ತು "ಕಾಮಪ್ಪನ್ನ ಮಕ್ಕಳು, ಕಳ್ಳ ** ಮಕ್ಕಳು, ಏನೇನು ಕದ್ದರು, ......." 

ಈ ಉಡಾಳಾಗಿರಿ ಒಂದು ಕಡೆ ಆದ್ರ, ಇನ್ನೊಂದು ಗುಂಪು ಇರ್ತಿತ್ತು, ವರ್ಷಾ ಪೂರ್ತಿ ನಮ್ಮ ಓಣಿ, ಪಕ್ಕದ ಓಣಿ, ಹತ್ತಾರು ವಠಾರದಾಗ ಏನು ಗದ್ದಲ ಆಗೇವು, ಯಾರಿಗೆ ಯಾರ ಮುಖಾ ಕಂಡ್ರೂ ಆಗಂಗಿಲ್ಲ, ಅತೀ ಮುಖ್ಯವಾಗಿ, ಆಜೂ ಬಾಜ ಮನೆಯವರಿಗೆ ಆಗಿ ಬರೋ ಹಂಗಿಲ್ಲ, ಅಂಥಾ ಎಲ್ಲಾ ಮನೆ ಹಾಳ್ information collect ಮಾಡಿ, ಹೋಳಿ ಹಿಂದಿನ ರಾತ್ರಿ, ಅವರ ಅಂಗಳದಾಗಿನ ಸಾಮಾನ್ ಇವರ ಅಂಗಳದಾಗ, ಇವರದ್ದು ಅವರ ಅಂಗಳಾದಾಗ. ಬೆಳಿಗ್ಗೆ ಎದ್ದು ಇಬ್ಬರೂ ಮನೆಯವರು ಆ ಸಾಮಾನ್ ತೊಗೊಳೋಕಾಂತ್ ಮಾತಾಡಿ ದೋಸ್ತರಾಗಿದ್ದು ಕಮ್ಮಿನ, ಬೆಳ್ ಬೆಳಿಗ್ಗೆ ಜಗಳ ಹತ್ತಿದ್ದು ಜಾಸ್ತಿ. ಯಾವ ಮನ್ಯಾಗ ಜಗಳ ಜಾಸ್ತಿ ಮಜಾ ಕೊಡೋದು ಆ ಮನಿ ಅಗಸಿ ಕಟ್ಟಿ ಮ್ಯಾಲ ನಮ್ಮ ಗುಡಾರ.

ಅವ್ವಾ ಎಷ್ಟ ಹೇಳಿ ಕಳಸಿರ್ಲಿ, "ನೋಡಪ್ಪಿ, ಗಲ್ಲಕ್ಕ ಚೂರ ಚೂರು ಬಣ್ಣ ಹಚ್ಚು, ಅವರೂ ಹಚ್ಚತಾರ, ಹಚ್ಚಿಸ್ಕೋ, ಹನ್ನೆರಡು ಅಷ್ಟೊತ್ತಿಗೆ ಮನ್ಯಾಗ ಇರಬೇಕು, ಸರಿನಾ". "ಹೂನಬೆ " ಅಂಥಾ ಗಲ್ಲ ಅಲ್ಲಾಡಿಸಿ, ಮನಿಯಿಂದ ಹೋರಾಗ ಬಿದ್ದ ಅರ್ಧ ತಾಸಿನಾಗ ಬಟ್ಟಿ ಛಿದ್ರ ಛಿದ್ರ ಆಗಿ ಕರೆಂಟ್ ವೈರ್ ಮ್ಯಾಲ ನೇತಾಡ್ತಿರ್ತಿದ್ವು. ಗಲ್ಲಕ್ಕ, ಹಣಿಗೆ ಅಷ್ಟ ಬಣ್ಣ ಹಚ್ಚೋ ಮಕ್ಕಳ ಅಲ್ಲಾ ನಾವು, ಎದರಿಗೆ ಬರೋವನ ಅಂಗಿ ಗುಂಡಿ ಕಿತ್ತು ಎದಿಗೆ, ಬೆನ್ನಿಗೆ ಕರ್ಮಾಟ ಎಲ್ಲಾ ಹಚ್ಚಿ, ತಲಿಗೆ ಒಂದು ತತ್ತಿ(egg) ಒಡದು, ರಾಡಿ ರಂಪಾಯಣ ಮಾಡಿ-ಮಾಡಿಸ್ಕಂಡು, ಹೆತ್ತವ್ವನ ಮುಂದ ಹೋಗಿ ನಿಂತ್ರ, "ಆವಾ ಹೋಳಿ ಆಡಾಕ ಹೋಗ್ಯಾನಪ, ಬಂದ್ರ ಯಾರು ಬಂದಿದ್ರು ಅಂಥ ಹೇಳ್ಲಿ, ಏನರ urgent ಕೆಲ್ಸಾ ಐತಿ" ಅಂಥಾ ಕೇಳಿದ್ದೂ ಉಂಟು. "ನಾನಬೆ " ಅಂಥಾ ಒಡೆದ ಗಂಟಲೊಳಗ ಹೇಳಿದ್ರ ನನ್ನ ಮಗ ಅಂಥ ಗುರ್ತು ಹಿಡಿಯಾಕ ಆಕೀಗೇ ಎರೆಡು ಮೂರು ನಿಮಿಷಾನಾದ್ರು ಬೇಕಿತ್ತು. 

ಬಣ್ಣ, ಗ್ರೀಸ್, ನಾಲಿ ನೀರು, ತತ್ತಿ, ಎದು ಎದ್ರಾಗ ಹೋಳಿ ಆಡಿಲ್ಲ. ಮನಿಗೆ ಬರೋ ಅಷ್ಟ್ರೋಳಾಗ 3-4 ಘಂಟೆ ಆಗೋದು, ಹೊಟ್ಟಿ ಹಸದು ತಳ ಮುಟ್ಟುತ್ತಿತ್ತು, ಆವಾಗ ಮನಿಗೆ ಬರ್ತಿದ್ವಿ. ಮನಿಗೆ ಬಂದ ಮ್ಯಾಲ ಒಂದು drum ನಾಗ ಬಣ್ಣ ಕಲಸಿ, ಚಂಬು, ವಾಟೆ, ಲೋಟ ಏನ್ ಸಿಕ್ಕಿತೋ ಅದರೊಳಗ ಮನೆರಿಗೆ ಎಲ್ಲಾ ಉಗ್ಗಿ, ಅಕ್ಕ ಪಕ್ಕದ ಮನೆಯವರಿಗೂ ಉಗ್ಗಿ ಆಟಾಡಿ ಬರೋ ಅಷ್ಟೊತ್ತಿಗೆ ಕಟ್ಟಗಿ ಒಲ್ಯಾಗ ಬಿಸಿ ಬಿಸಿ ನೀರು ಕಾದಿರವು, ಕೊಬ್ಬರಿ ಎಣ್ಣೆ ಮೈಗೆಲ್ಲ ಹಚ್ಚಿ, ತಿಕ್ಕಿ ತೀಡಿದ ಮೇಲೆ ಸ್ನಾನ, ಆವಾಗ ನಮ್ಮ ಅಮ್ಮಂಗೆ ಖಾತ್ರಿ ಆಗೋದು ನನ್ ಮಗಾ ಇವಾ ಅಂಥ. 

ಅಪ್ಪನಿಂದ ಹೊಡತಗಳು, ಅವ್ವನಿಂದ ಬೈಗುಳಗಳು ಇರ್ದ ಯಾವ ಹೋಳಿ ಹಬ್ಬ ಪೂರ್ತಿ ಆದೀತು. "ಹೋಳಿ ಅದ ಮಗನ" ಅಂಥಾ ಸಿಕ್ಕಿ ಸಿಕ್ಕಿದೋರಿಗೆ ಏನೇನೋ ಹಚ್ಚಿ ಬಂದ್ರ, ಅವರೆಲ್ಲ ಅವರಪ್ಪನ್ನ ಕರ್ಕೊಂಬಂದು ನಮ್ಮಪ್ಪನ ಜೊತೆ ಒಂದೆರೆಡು ದುಂಡು ಮೇಜಿನ ಸಭೆ ಮುಗಿದಮೇಲೆ ನಮಗೆ ಒಂದು ಅಂದಾಜು ಸಿಗೋದು, ಇವತ್ತು ಎಷ್ಟು ಹೊಡ್ತಾ ಬೀಳಬೋದ ಅಂಥ.

ಹಿಂಗೆಲ್ಲಾ ಆಡಿದ ನಾವು, ನಾಗರೀಕ ಸಮಾಜದಲ್ಲಿ , ಹೊಸಾ ಬಿಳಿ ಬಟ್ಟೆ ಹಾಕ್ಕೊಂಡು, ಗಲ್ಲ ಗದ್ದಕ್ಕೆ ಅಷ್ಟೇ ಪುಡಿ ಬಣ್ಣ ಹಚ್ಚಿ "Happy ಹೋಳಿ" ಅನ್ನೋ ಸ್ಥಿತಿಗೆ ಬಂದು ಬಿಟ್ಟೇವಿ.

ಹೋಳಿ, ನಮ್ಮ ವರ್ಷದ ಕೊನೇ ಹಬ್ಬ, ವರ್ಷಪೂರ್ತಿ ಬೆಳಿಸಿಕೊಂಡ ಕಾಮನೆಗಳು, ಸೋಲುಗಳು, ಬಂಧನದ ಬೇಲಿಗಳನ್ನ ಸುಟ್ಟು, ನಮ್ಮೆಲ್ಲ ಮುಖವಾಡ, ಕಳಂಕ ಕಳಚಿ ಹೊಸಾ ವರ್ಷವನ್ನ ನವೀನ ಮನಸ್ಸಿಟ್ಟು ಬರಮಾಡಿಕೊಳ್ಳೋಕೆ ತಯಾರಿ ಮಾಡೋಣ.


ಹ್ಯಾಪಿ ಹೋಳಿ.


Wednesday, October 30, 2024

ನಿರಂತರತೆ ಹಾಗೂ ನಮ್ಮೊಳಗಿರುವ ಶೈತಾನ

 ಮೊನ್ನೆಯಷ್ಟೆ ಯಾವುದೋ ಕಾರ್ಯದ ನಿಮಿತ್ತ ನನ್ನ ಹುಟ್ಟೂರಿಗೆ ಹೋಗಿದ್ದಾಗ ಕಾಲೇಜು ದಿನಗಳ ಗೆಳೆಯನೊಬ್ಬ ಆಕಸ್ಮಿಕವಾಗಿ ಸಿಕ್ಕ. ನನ್ನನ್ನ ಟಬ್ಬಾ, ಡುಮ್ಮಿ, ಮಾಮಾ ಎಂದು ಸಂಬೋಧಿಸಿಯೇ ನನ್ನ ಗೆಳೆಯರಿಗೆ ರೂಡಿ. ನನ್ನ ಆಕಾರ ಹಾಗೂ ಆವೃತ್ತಿಯೇ ಹಾಗೆ. ಇಷ್ಟ ಪಟ್ಟು ಬೆಳೆಸಿದ ದೇಹವನ್ನ ಕಷ್ಟ ಪಟ್ಟು ಕರಿಗಿಸಲಾದೀತೇ?

"ಟಬ್ಬಾ, ಹೆಂಗದಿ. ಎಷ್ಟು ವರ್ಷಾ ಆತು ನಿನ್ನಾ ನೋಡಿ, ಆವಾಗ ಹೆಂಗ್ ಇದ್ದ್ಯೋ, ಈಗೂ ಹಂಗ ಅದಿ ಅಲ್ಲಲೇ. ಒಂಚೂರೂ ಕಮ್ಮಿ ಆಗೇಲ ನೋಡ್ ನೀ. ಅವಾಗು ಇವಾಗೂ ಡುಮ್ಮಾನೇ."

ನನ್ನ ಕಪ್ಪು ಮುಖ ಅರೆ ಕ್ಷಣ ಕೆಂಪೇರಿದ್ದು ನಿಜಾ, ಇವನು ಒಂದು ದಿನವಾದರೂ ನಮ್ಮ ಮನೆಗೆ ದಿನಸಿ ಹಾಕಿದ್ದಾನೆಯೇ, ಹೋಗಲಿ ಒಂದು ಹೊತ್ತಿನ ಊಟ ಉಣಬಡಿಸಿದ್ದಾನ ? ಇವನಾರು ನನ್ನ ವಿಕಾರದ ಬಗ್ಗೆ ಇಷ್ಟು ಕಠೋರ ಸತ್ಯಗಳನ್ನ ಹೀಗೆ ಎಲ್ಲರ ಮುಂದೆ ನನಗೆ ಮುಜುಗುರವಾಗುವಂತೆ ಹೇಳುವುದಕ್ಕೆ. ಇವನ ಪರಿಚಯವಾದರೂ ಏನು?

ನನ್ನ ಕಣ್ಣ ಹುಬ್ಬಿನಲ್ಲಿ ಮೂಡಿದ ಪ್ರಶ್ನಾರ್ಥಕ ಚಿಹ್ನೆ ಗಮನಿಸಿದ ಆತ, "ಟಬ್ಬ, ನಾನಲೇ ಸಂಜು, ಸಂಜಯ್".

ನನಗೆ ಒಂದು ಕ್ಷಣ ಹಿಡಿಯಿತು ಮೆದುಳಿನ ಯಾವುದೋ ಮೂಲೆಯಲ್ಲಿ ಧೂಳಿಟ್ಟಿದ ಆ ನೆನಪನ್ನ ಹುಡುಕಿ ತೆಗೆಯಲು. "ಜಿಮ್ಮಿ ಸಂಜು ನಾ, ಏನೋ ಇಷ್ಟೊಂದು ಬದಲಾಗಿದ್ದಿಯ, ಜಿಮ್ ನಿಲ್ಲಿಸಿಬಿಟ್ಟೆಯ"

"ಜಿಮ್ ನಿಲ್ಲಿಸಿ ಯಾವ ಜಮಾನಾ ಆಯ್ತು ಟಬ್ಬ, ಈಗ ಅದೇ ಗೆಳೆಯರು bar ಅಲ್ಲಿ ಸೇರ್ತೀವಿ. ಒಂದು ವ್ಯಯಸ್ಸಾದ ಮೇಲೆ gym ಎಲ್ಲಾ ಯಾಕೆ, beer brandy ನೇ ಓಕೆ ಅನ್ಸುತ್ತೆ ಕಣೋ. ಈ ಸಂಜೆ ಫ್ರೀ ಇದ್ರೆ ರಾಜಭವನ bar and restaurant ಗೆ ಬಾ,  ನಾವಲ್ಲಿ ಖಾಯಂ ಗಿರಾಕಿಗಳು ಕಳೆದ 10 ವರ್ಷದಿಂದ. ಸಿಗುವಾ." ಎಂದು ಹೇಳಿ ಹೊರಟು ಹೋದ, ನನ್ನ ಮನಸ್ಸಿನಲ್ಲಿ ಸಣ್ಣದೊಂದು ಖಾಲಿಜಾಗ ಬಿಟ್ಟು.

ಸಂಜಯ, ಎಂಥಾ ಸ್ಪುರದ್ರೂಪಿಯಾಗಿದ್ದ ಗೊತ್ತೇ?! ಉದ್ದನೆಯ ಮೂಗು, ಅಗಲವಾದ ಹೆಗಲು, ಎದೆಯಷ್ಟೇ ಹೊಟ್ಟೆ, ಮೂಲಂಗಿ ಕಾಲುಗಳು. Personality ದೇವರು ತೂಗಿ ಹಾಕಿ ಹೊಲೆದು ಕಳಸಿದ್ದಾನೇನೋ ಎಂಬಷ್ಟು. ಸಂಜಯನಿಗೆ "ಜಿಮ್ ಸಂಜು" ಅಂತಲೇ ಅಡ್ಡ ಹೆಸರು. ಸಂಜೆ 6 ಘಂಟೆಗೆ ಸರಿಯಾಗಿ ಸಂಜಯನನ್ನು ನಾವು ಬೇರೆಲ್ಲೂ ಹುಡುಕುವ ಅಗತ್ಯವೇ ಇರಲಿಲ್ಲ. ಅಷ್ಟು ಶಿಸ್ತಾಗಿ ಜಿಮ್ ಅಲ್ಲಿ ತಾಲೀಮು ಮಾಡಿ ಅವನ ಆಹಾರ ತಜ್ಞರು ಸೂಚಿಸಿದಂತೆ ಆಹಾರ ಸೇವಿಸಿ ರಾತ್ರಿ10 ಗಂಟೆಯೊಳಗೆ ಮಲಾಗಿದರಾಯಿತು. 

ಅಂಥ ಸಂಜಯ ಈಗ gym ಕಡೆ ಹೊಳ್ಳಿಯೂ ಕೂಡ ನೋಡುತ್ತಿಲ್ಲ, ಅವನ ಆಹಾರಪದ್ದತಿ ಅದೋಗತಿಗೆ ಇಳಿದಾಗಿದೆ. Bar, beer ಅವನನ್ನು ವ್ಯಸನಿಯನ್ನಾಗಿ ಮಾಡಿ ಬಿಟ್ಟಿವೆ. 

ಸಹವಾಸ ದೋಷ, ಮಾಗುತ್ತಿರುವ ವಯಸ್ಸು, ಇರುವುದೊಂದೇ ಜೀವನ- ಎಲ್ಲವನ್ನೂ ರುಚಿಸಿ ರಂಜಿಸಿ ಸವಿದರಾಯಿತು. ನೀವೇನೇ ಸಬೂಬು ಕೊಟ್ಟು ಸಮಾಜಾಯಿಸಬಹುದು. ಆದರೆ ನೀವು ಗಮನಿಸಲೇಬೇಕಾದ ವಿಷಯವೆಂದರೆ ನಿಮ್ಮೊಳಗಿರುವ ಶೈತಾನ ಇವೆಲ್ಲವನ್ನೂ ನಿಮ್ಮ ಜೀವನದಲ್ಲಿ ನಿಮ್ಮ ಕಣ್ಣಂಚಿಗೂ ಸುಳಯದಂತೆ ತಂದು ಕೂರಿಸಿ ಬಿಟ್ಟಿರುತ್ತಾನೆ.

ದಿನನಿತ್ಯವೂ ನಸುಕಿನ ಮುಂಜಾನೆಯಲ್ಲಿ ಎದ್ದು ವಾಯುವಿಹಾರಕ್ಕೆ ಹೋಗುವ ನಿಮಗೆ, "ದಿನಾಲೂ ಹೊಕ್ಕಿ, ಚಳಿ ಬಾಳ ಅದ, ಇವತ್ತೊಂದು ದಿನ ಮಕ್ಕೊಂಡ್ರ ಲೂಕ್ಷಾನು ಏನೂ ಇಲ್ಲಾ". 

ದಿನವೂ ಮೂರೇ ಮೂರು ಇಡ್ಲಿ ತಿನ್ನುವ ನಿಮಗೆ " ಚಟ್ನಿ ತುಂಬಾ ಚೆನ್ನಾಗಿದೆ, ಇಡ್ಲಿ ಮಲ್ಲಿಗೆಗಿಂತ ಹಗುರ. ಇನ್ನೊಂದೆರಡು ಇಡ್ಲಿ ತಿಂದ್ರೆ ತೂಕ ಏನೂ ಹೆಚ್ಚಾಗಲ್ಲ."

ಕೆಲವು ಹಲವಾರು ಹೊತ್ತಿಗೆಗಳನ್ನು ಓದಿದ ನಂತರ "ನೀನೆಷ್ಟು ಬುದ್ಧಿವಂತ ಮಾರಾಯ, ಎಷ್ಟು ಪುಸ್ತಕಗಳನ್ನ ಅರೆದು ಕುಡಿದು ಬಿಟ್ಟಿದ್ದಿಯ, ನಿನ್ನ ಹಾಗೆ ಎಷ್ಟು ಜನರಿದ್ದಾರೆ ಹೇಳು ನೋಡುವಾ".

"ಅರೆರೆ, ಒಬ್ಬ ಹುಡುಗಿಯಾಗಿ ಇಷ್ಟೊಂದು ಸೇವೆಯಾ, ಎಷ್ಟೊಂದು ಹುಡುಗರಿಗೆ ಎಷ್ಟು ಸ್ಕೂಲ್ ಕಿಟ್ ಗಳು, ಎಷ್ಟು ಹೊದಿಕೆಗಳು ದಾನ ಮಾಡಿದ್ದೀಯಾ ನಿರಾಶ್ರಿತರಿಗೆ."

"ಎರೆಡು ತಿಂಗಳು ಸಿಗರೇಟ್ ಕಡೆ ಹೊಳ್ಳಿಯು ನೋಡಿಲ್ಲ, ಮನಸ್ಸಿನ ಮೇಲೆ ಎಷ್ಟು ನಿಯಂತ್ರಣ, ತುಂಬಾ ಹೆಮ್ಮೆ ಪಡುವ ವಿಷಯ. ಮಳೆ ಬಿದ್ದಿದೆ, ಒಂದು ಬತ್ತಿ ಹೊಡೆದರೆ ಏನಾದೀತು, ನೀನು ಬೇಡಾ ಅಂದಾಗ ನಿಲ್ಲಿಸಿದರಾಯಿತು".

"ಅರೇರೇರೇ, ಎಲ್ಲಾ ದಾಂಡಿಗರು ನೆಲಕ್ಕೆ ಬಿದ್ದು ಮೀಸೆ ಮಣ್ಣಾಗುತ್ತಿದ್ದರೂ ನೀನೊಬ್ಬನೇ ಅವಡುಗಚ್ಚಿ ನಿಂತು ನಿನ್ನ ತಂಡವನ್ನು ಗೆಲ್ಲಿಸಿದೆ, ಭಲೇ, ಶಭಾಷ್. ನಿನ್ನ ಸರಿಸಾಟಿ ಯಾರಿನ್ನು. ನಿನಗೇಕೆ ಬೇಕಿನ್ನು ತಾಲೀಮು, ಮೀನಿಗೆ ಈಜು ಹೇಳಿ ಕೊಡಬೇಕೇ "

"ಲೋಕವೇ ಅರ್ಧ ರಾತ್ರಿಯ ನಿದ್ದೆಯನ್ನು ಆನಂದಿಸುವಾಗ ನೀನು ಮಾತ್ರ ಕಣ್ಣು ರೆಪ್ಪೆಗೆ ಖಡಕ್ಕಾಗಿ ಎಚ್ಚರಿಕೆಯನ್ನಿತ್ತು ಗಣಕ ಯಂತ್ರದ ಮುಂದೆ ಕೂತು ಕೆಲಸ ಮಾಡುತ್ತಿರುವೆಯಲ್ಲಾ, ಏನು ಹೇಳಿ ಹಾಡಿ ಹೊಗಳಲಿ . ಇನ್ನು ನಾಲ್ಕು ತಿಂಗಳು ಕೆಲಸ ಮಾಡಿದ್ದರೂ ಆಯಿತು, ಅಷ್ಟೂ ನೀನು ಇದೊಂದೇ ವಾರದಲ್ಲಿ ಮುಗಿಸಿದ್ದಿಯ"

 ಹೀಗೆಯೇ ನಿಮ್ಮ ಕಿವಿಯಲ್ಲಿ ಪಿಸುಗುಟ್ಟಿ ನಿಮ್ಮ ನಿರಂತರತೆಯ ಹಾದಿ ತಪ್ಪಿಸುವ ಆತ ನಿಮ್ಮೊಳಗೇ ಇದ್ದಾನೆ, ಹುಷಾರು.


ಶ್ರೀಅಪ್ಪಿ  

Saturday, October 26, 2024

Sorry, I'm not sorry

 ಇತ್ತೀಚಿಗೆ ನಮ್ಮ ಎರೆಡು ವರ್ಷದ ವಸತಿ ಸಮುಚ್ಚಯದಲ್ಲಿ, ಹಿಂದೆಂದೂ ನಡೆಯದ ಘಟನೆ ಕೆಲವರನ್ನು ಘಾಸಿಗೊಳಿಸಿತ್ತು. ಅಂದಾಜು ಸಾವಿರ ಮನೆಗಳು ಇರುವ ಒಂದು ಪುಟ್ಟ ಹಳ್ಳಿಯೇ ಸರಿ. ಹತ್ತು ಎಕರೆಯ ಜಾಗದಲ್ಲಿ ಸಾವಿರ ಮನೆಗಳು ಹಾಗು ಸಾಲು ಸಾಲು ಕಾರುಗಳು(ಸಾಲದ ಕಾರುಗಳು). ಎಲ್ಲರಿಗೂ ಎಲ್ಲರ ಮುಖ ಪರಿಚಯವಿದೆ, ಬೆರಳಿಕೆಯಷ್ಟು ಜನ ತಮ್ಮದೇ ಆದ ರೀತಿಯಲ್ಲಿ ಹೆಸರುವಾಸಿ. (ನೆನಪಿರಲಿ, ಕನ್ನಡಿಗರಿಗೆ Dr ರಾಜಕುಮಾರ ಅವರೂ ಗೊತ್ತು, ವೀರಪ್ಪನ್ ಕೂಡಾ.)

ಯಾವುದೋ ಒಂದು ವಿಷಗಳಿಗೆಯಲ್ಲಿ, ಒಬ್ಬ ಮಹಾಷಯ, ಇನ್ನೊಬ್ಬನಿಗೆ  ಬೆರಳು ಸನ್ನೆ ಮಾಡಿ ಅವಾಚ್ಯ ಶಬ್ದಗಳ ಬಳಿಕೆಯಿಂದ ಅವಮಾನಿಸಿದ್ದು ನಮಗೆ ಜೀರ್ಣಿಸದೆ ನಮ್ಮ ಹಳ್ಳಿಯ ಚುನಾಯಿತ ಪಂಚಾಯತಿ ಪ್ರತಿನಿಧಿಗಳ ಬಳಿಗೆ ವಿಷಯ ತಲುಪಿಸಿದೆವು. ಉತ್ತರವಾಗಿ, ತಪ್ಪುಕೋರಿಕೆ ಪತ್ರ ಸಲ್ಲಿಸುವುದಾಗಿ ತೀರ್ಮಾನವಾಯಿತು. ವಿಷಯ ಇಷ್ಟೇ ಆಗಿದ್ದರೆ ಈ ಅಂಕಣ ಬರೆಯುವ ಜರೂರತ್ತು ನನಗೇನಿತ್ತು. ಆಗ ನನಗೆ ಹಾಗು ಕೆಲವು ಸಮಾನ ವಕ್ರ ಮನಸ್ಸಿನವರಿಗೆ ತೋಚಿದ್ದು, "ಸರಿ, ಇನ್ನು ಮುಂದೆ ಈ ನಾಗರಿಕ ಸಮುಚ್ಚಯದಲ್ಲಿ ಯಾರು ಯಾರಿಗೆ ಬೇಕಾದರೂ, ಯಾವಾಗಲಾದರೂ ಹೇಗೆ ಬೇಕೋ ಹಾಗೆ ವ್ಯವಹರಿಸಬಹುದು, ಅದು ಇನ್ನೊಬ್ಬರಿಗೆ ನೋವಾಗಿದ್ದರೆ ಮಾತ್ರ ಒಂದು ತಪ್ಪು ಕೋರಿಕೆ ಪತ್ರ ಕೊಟ್ಟರಾಯಿತು, ಅಷ್ಟೇ. ಅಲ್ಲವೇ ?".

ಈ ಘಟನೆ ಮತ್ತು ಅದಕ್ಕೆ ನಮ್ಮ ಚುನಾಯಿತ ಪ್ರತಿನಿಧಿಗಳ ತೀರ್ಮಾನ ನನಗೆ, Dr H. ನರಸಿಂಹಯ್ಯ, ಮಾಜಿ ಪ್ರಾಂಶುಪಾಲರು, National College, ಬಸವನಗುಡಿ, ಬೆಂಗಳೂರು ಅವರು ಹಂಚಿಕೊಂಡ ಅನುಭವ ನೆನಪಿಸಿತು, ಒಪ್ಪಿಸಿಕೊಳ್ಳಿ.

Dr H ನರಸಿಂಹಯ್ಯನವರು, H.N ಎಂದೇ ಚಿರಪರಿಚಿತ. ಅವರು ವಸತಿ ಶಾಲೆಯೊಂದರಲ್ಲಿ ಮೇಲ್ವಿಚಾರಕರಾಗಿದ್ದ ಕಾಲಘಟ್ಟ. ಶಿಸ್ತಿಗೆ ಇನ್ನೊಂದು ಹೆಸರೇ H.N ಎನ್ನುವಷ್ಟು ವಿದ್ಯಾರ್ಥಿಗಳಲ್ಲಿ, ಸಹೋದ್ಯೋಗಿಗಳಲ್ಲಿ ಛಾಪು ಇದ್ದ ಸಮಯವದು. ತುಂಬ ಅಶಿಸ್ತು ಅಗೌರವಕ್ಕೆ ಪಾತ್ರವಾದ ವಸತಿ ಶಾಲೆಗೆ ಇವರ ವರ್ಗಾವಣೆ ಆಯ್ತು, ಆದೇಶದಲ್ಲಿ H.N ಅವರಿಗೆ ವಿಶೇಷ ವಿನಂತಿ : ಆದಷ್ಟು ಬೇಗ ಆ ಶಾಲೆಯಲ್ಲಿ ಕಟ್ಟುನಿಟ್ಟು ಶಿಸ್ತಿನ ಸ್ಥಾಪನೆ ಆಗಬೇಕು, ಓದುತ್ತಿರುವರಲ್ಲಿ ಹೆಚ್ಚು ಪಾಲು ನಮ್ಮ ರಾಜಕಾರಣಿಗಳ ಮಕ್ಕಳು, ಸಂಭಂದೀಕರ  ಮಕ್ಕಳು ಎಂದು. 

H.N ಅವರು ಕರ್ತವ್ಯಕ್ಕೆ ಹಾಜರಾಗಿ, ಆ ವಸತೀಶಾಲೆಯ ಜವಾಬ್ಧಾರಿಯನ್ನು ಕೈಗೆತ್ತಿಕೊಂಡು ಎರಡು ಮೂರು ದಿನ ಪರಿಶೀಲಿಸಿದರು. ಎಲ್ಲರೂ ಅಶಿಸ್ತಿನ ಮೂಟೆಗಳೇ. 

ಸರಿ, ಕ್ರಮಬದ್ಧತೆಯ ಮೊದಲ  ಭಾಗವಾಗಿ ಬೆಳಿಗ್ಗೆ 6 ಘಂಟೆಗೆ ಎಲ್ಲರೂ ಶಾಲೆಯ ಆವರಣದಲ್ಲಿ ಸಾಲಾಗಿ ನಿಂತು ನಾಡಗೀತೆ " ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ" ಹಾಗು ರಾಷ್ಟ್ರಗೀತೆ ಹೇಳಿ ಅವರವರ ಕೋಣೆಗೆ ತೆರಳಿ ಓದಿಕೊಳ್ಳ ತಕ್ಕದ್ದು ಎಂದು ಎಲ್ಲಾ ಕೊಠಡಿಗಳಿಗೆ ಆದೇಶ ಹೊರಡಿಸಲಾಯಿತು.  ಇದಾದ ಒಂದೆರಡು ವಾರದಲ್ಲಿ H.N ಅವರ ಗಮನಕ್ಕೆ ಬಂದದ್ದು 4-5 ವಿದ್ಯಾರ್ಥಿಗಳು ಬೆಳಿಗ್ಗೆ 6 ಘಂಟೆಗೆ ಬರುತ್ತಿಲ್ಲವೆಂದು, ಎಷ್ಟು ಎಚ್ಚರಿಸದರೂ ನಿರ್ಲಕ್ಷಿಸಿದ್ದಾರೆಂದು. 

ಆ ವಿದ್ಯಾರ್ಥಿಗಳನ್ನು H.N ಅವರ ಕೊಠಡಿಗೆ ಕರೆಸಿಕೊಳ್ಳಲಾಯಿತು. ಗುಮಾಸ್ತನಿಂದ ಹಿಡಿದು ಮುಖ್ಯೋಪಾದ್ಯಯರೆಲ್ಲರಿಗೂ ಕುತೂಹಲ, H.N ಅವರು ಈ ದರ್ಪದ ಮದದಾನೆಗಳನ್ನು ಹೇಗೆ ಪಳಗಿಸುತ್ತಾರೆಂದು. ವಿದ್ಯಾರ್ಥಿಗಳ ಮುಖದಲ್ಲಿ ಆತಂಕ, ಇವತ್ತು ಬದುಕುಳಿದರೆ ಸಾಕು ಎನ್ನುವಷ್ಟು ಭೀತಿ. 

H.N ಅವರು ಘಾಂಬಿರ್ಯವಾಗಿ : ಎಷ್ಟು ಎಚ್ಚರಿಕೆ ಕೊಟ್ಟರೂ ನಿಮ್ಮ ತಪ್ಪು ತಿದ್ದಿಕೊಂಡಿಲ್ಲವೆಂದರೆ ನಿಮ್ಮದು ದಪ್ಪ ಚರ್ಮವೇ ಇರಬೇಕು, ಇರಲಿ, ನಿಮ್ಮಂಥವರಿಗೆ ಏನು ಮಾಡಬೇಕೆಂದು ನನಗೆ ಅರಿವಿದೆ. ಗಮನವಿಟ್ಟು ಕೇಳಿ, ಇನ್ನು ಮೇಲೆ ಒಂದುದಿನ ಗೈರು ಹೈಜರಾದರೂ ತಲಾ ೫ ಪೈಸೆ ದಂಡ, ಇದರ ಮೇಲೆ ನಿಮಗೆ ಬಿಟ್ಟಿದ್ದು, ಬೆಳಗಿನ ಪ್ರಾರ್ಥನೆಗೆ ಬರುವಿರೋ ಇಲ್ಲವೋ, ಎಂದು.

ಒಬ್ಬ ಹುಡುಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಹೊರಗೆ ನಿಂತ ಗುಮಾಸ್ತನ ತಮಟೆಗೆ ಬೀಳುವಷ್ಟು ಜೋರಾಗಿತ್ತು. ಆತ ತನ್ನ ಎಲ್ಲಾ ಜೇಬುಗಳನ್ನು ತಡಿಕಾಡಿ ಸಿಕ್ಕ ಅಷ್ಟು ಕಾಸನ್ನು ಒಟ್ಟುಗೂಡಿಸಿ, ಲೆಕ್ಕ ಹಾಕಿ, ಹೇಳಿದ್ದು : " ಸಾರ್, ನಾವು ಈ ಊರರಲ್ರಿ. ಬೆಂಗಳೂರು ಚಳಿಗೆ ನಸಿಕ್ನಾಗ ಎದ್ದೇಳಾಕ ಆಗವಲ್ದರಿ. ಅವ್ವಾಗ ಟಪಾಲು ಹಾಕೇವಿ, ಬೆಂಗಳೂರಿಗೆ ಕಳಸೋ ಹಂಗಿದ್ರ ಇನ್ನೂ ಒಂದೆರೆಡು ಖೌದಿ, ಕಂಬಳಿನೂ ಕಳಸವಾ ಅಂತ. ಇದು ಒಂದು ರುಪಾಯಿ ಐತ್ರಿ ಸರ್ರ, ಒಪ್ಪುಸ್ಕೋಬೇಕು. ನಾ ಇನ್ನೂ ೨೦ ದಿನಾ ಮುಂಜ್ ಮುಂಜಾನಿ ಬರಂಗಿಲ್ಲರಿ, ಹೊಟ್ಟಿಗೆ ಹಾಕ್ಕೋರಿ ".

H.N ಅವರು ನಗದೆ ಬೇರೆ ವಿಧಿಯಿರಲಿಲ್ಲ .



--------- ಶ್ರೀಅಪ್ಪಿ ---------------

Thursday, October 24, 2024

ಮರೆಯಾಗುತ್ತಿರುವ ಕ್ರೀಡೆಗಳು ಹಾಗು ಅಡ್ಡ ಪರಿಣಾಮಗಳು

 ನಾವು ಚಿಕ್ಕವರಿದ್ದಾಗ ಏನ್ ಏನ್ ಆಡಿಲ್ಲಾ ಹೇಳಿ. ಕುಂಟಾ ಪಿಲ್ಲೆ, ಮರಕೋತಿ, ಕಣ್ಣಾ ಮುಚ್ಚಾಲೆ, ಚೌಕಾ, ಲಗೋರಿ ಮತ್ತಿನ್ನೇನೋ... ಆಯಾ ವಯಸ್ಸಲ್ಲಿ ಆಯಾ ಆಟಾ ಆಡಿ ನಮ್ಮ ಅಣ್ಣಾ ಅಕ್ಕಾ ಏನ್ ಆಡ್ತಿದ್ದಾರೆ ಅಂಥಾ ಕದ್ದು ಇಣಿಕಿ ನೋಡಿ ನಾವು ಆಟ ಆಡಿ ಏನೂ ಗೊತ್ತಾಗದೆ ಕೈ ಕಾಲು ಗಾಯ ಮಾಡ್ಕೊಂಡಿದ್ದು ಜಾಸ್ತಿ. ಗಾಯಾ ಮಾಡ್ಕೊಂಬಂದಿದಿಯಾ ಅಂಥ ಅಪ್ಪ ಅಮ್ಮನ ವದೆ ತಿಂದಿರೋದು ಇದೆ, ಗಾಯಕ್ಕೆ ಅಳೋದ ಅಪ್ಪ ಅಮ್ಮ ಹೊಡದ್ರಲ್ಲ ಅಂಥಾ ಅಳೋದಾ... 


ಆ ವಯಸ್ಸಿಗೆ ಎಲ್ಲರೂ ಬೇಕಿತ್ತು, ಒಂದು ನಿಮಿಷದಲ್ಲಿ ನಿನ್ ಜೊತೆ ಇನ್ನು ಮಾತಾಡಲ್ಲಲೇ ಅಂಥಾ ಭಯಾನಕವಾಗಿ ಜಗಳ ಮಾಡಿ ಹತ್ತು ನಿಮಿಷಾನು ಆಗಿರಲಿಲ್ಲ, ಇಬ್ಬರು ಹೆಗಲು ಮೇಲೆ ಕೈ ಹಕ್ಕೊಂಡು ಹುಣಿಸೆ ಹಣ್ಣಿನ ಹುಳಿ ಚಿಗುಳಿ ತಿಂದಿದ್ದು ಈಗ ಸಿಹಿ ನೆನಪು.

ಆದರೆ ಇವತ್ತಿನ ಮಕ್ಕಳನ್ನು ನೋಡಿದ್ರೆ ಸ್ವಲ್ಪ ಬೇಸರವಾಗುತ್ತೆ, ಅವರಿಗೆ ಖಾಲಿ ಸಮಯವೇ ಇಲ್ಲ, ಇದ್ದರೂ ಅದು YouTube ಅಲ್ಲೋ ಯಾವದೋ PlayStation ಅಲ್ಲೋ ಕಳೆದು ಹೋಗ್ತಿದೆ. ನಾನು ಅದು ಕೆಟ್ಟದ್ದು, ಒಳ್ಳೇದು ಅಂತ ಹೇಳ್ತಿಲ್ಲ ಆದ್ರೆ ನನ್ನ ಅನಿಸಿಕೆಗಳು, ನನ್ನ ಗಮನಕ್ಕೆ ಬಂದದ್ದು ಹೀಗಿವೆ.


ಕಣ್ಣಾ ಮುಚ್ಚಾಲೆ ಅಲ್ಲಿ ನಾವು ಕಟ್ಟಿಗೆಯ ಕಪಾಟಿನ ಚಿಕ್ಕದೊಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡು ಉಸಿರು ಬಿಗಿ ಹಿಡಿದು ನಿಶ್ಯಬ್ದವಾಗಿ ಕೂತಿದ್ದಾಗ ನಮ್ಮ ಮನಸ್ಸಿಗೆ ಇನ್ನೆಂದೂ CASTROPHOBIA ಬರದಂತೆ ಅತೀ ಸಲೀಸಾಗಿ ತಳ್ಳಿ ಹಾಕಿಬಿಟ್ಟಿದ್ದೆವು. 


ಮರಕೋತಿ ಆಡುವಾಗ ಮರವನ್ನ ಹತ್ತಿದ್ದು, ಬಿದ್ದು ಗಾಯ ಮಾಡಿಕೊಂಡು ತದನಂತರ ಮತ್ತೇ ಏನೂ ಆಗೇ ಇಲ್ಲವೇನೋ ಎಂಬಂತೆ ನಮ್ಮ ಕಣ್ಣೀರನ್ನು ನಾವೇ ಒರೆಸಿಕೊಂಡು ಮರವನ್ನಾ ಮರಳಿ ಏರಿದಾಗ hieghtophobia ಯಾವುದೋ ಪರ್ವತಾವನ್ನೇರಿ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ನಮ್ಮ ಗಮನಕ್ಕೆ ಬರಲೇ ಇಲ್ಲ ನೋಡಿ.


ಕಬ್ಬಡ್ಡಿ, ಖೋ ಖೋ ಆಡಿದ್ದಾಗ ನಮ್ಮ ಎರಡನೇ ಹೃದಯವಾದ ಮೀನಖಂಡದ ಮೇಲೆ ಆದ ವ್ಯಾಯಾಮವಂತೂ ಇಂದಿಗೂ ನಮ್ಮ ಕೈ ಹಿಡಿದಿದೆ ಎಂದರೆ ನಂಬುವರಾರು? ಆದರೆ ಆ ಕ್ರೀಡೆಗಳು ಕಲಿಸಿದ ಸಾಂಘಿಕ ಪ್ರಯತ್ನ, ತಂತ್ರಗಾರಿಕೆ ಮತ್ತ್ಯಾವ team building activity ಹೇಳಿಕೊಡಬಲ್ಲದು , ನಮಗಿವ್ಯಾವುದು ಪ್ರಾಮುಖ್ಯವೇ ಆಗಲಿಲ್ಲ, ಗೆದ್ದರೆ ಒಂದು ಹಂಡೆ ಹಾಲು ಸಿಗುತ್ತಿತ್ತು ಇಲ್ಲದಿದ್ದರೆ P.T ಮಾಸ್ತರು ಇನ್ನೆಷ್ಟು ಓಡಿಸಿ ಆಡಿಸುವರೋ ಎಂಬ ದುಗುಡ.

Stress management ಅನ್ನು ಹೇಳಿ ಕೊಟ್ಟ ನಮ್ಮ P.T ಮಾಸ್ತರರಿಗೆ ಸಾಷ್ಟಾಂಗ ನಮಸ್ಕಾರ.

 

ಚೌಕ ಇಂದು ಲಿಡೋ, ಜೂಜು ರೂಪ ತಾಳಿದೆ ಆದರೆ ಅದು ಕಲಿಸಿದ ಗಣಿತ ಅಷ್ಟಿಷ್ಟಲ್ಲ. ಸಂಕಲನ, ಋಣಾಕಾರ, ಮೂರು ಆರರ, ನಾಕು ಎಂಟರ ಮಗ್ಗಿ ಎಷ್ಟು ಸುಲಲಿತವಾಗಿ ನಮ್ಮ ದಿನನಿತ್ಯದ ಸಂಜೆಯ ಒಂದು ಭಾಗವಾಗಿ ಹೋಗಿತ್ತು.


ಇನ್ನು ಲಗೋರಿಗೆ ಬರುವ, ದಿನಕ್ಕೆ ಎಷ್ಟು ಸಲ ನಿಮ್ಮ ಮಕ್ಕಳು ಮಂಡಿಯೂರಿ, ಅರ್ಧ ಬಾಗಿ, ದೃಷ್ಟಿಯನ್ನು ಪೂರ್ತಿ ಕೇಂದ್ರೀಕರಿಸಿ ಗುರಿ ಇಟ್ಟು ಆಡಿದ್ದುಂಟು, ಇನ್ನೊಬ್ಬ ನಿಮ್ಮ ಗೆಳೆಯ ಕಲ್ಲನ್ನು ಜೋಡಿಸುವಾಗ ಎದುರಾಳಿ ಗುಂಪನ್ನು ವಿಕರಿಸಿ, ಲಗೋರಿ ಎಂದು ಗಂಟಲು ಕಿತ್ತು ಹೋಗುವ ಹಾಗೆ ಕಿರಿಚುವಾಗ, Eye Hand moment and alignment ಅಂದರೆ ಗೊತ್ತಾಗುತ್ತಿತ್ತಾ, ಆ ಕ್ಷಣದಲ್ಲಿ ನಮ್ಮ ಗುರಿ ಇದ್ದಿದ್ದು ಒಂದೇ, ಚೆಂಡು ನಮಗೆ ಬೀಳದಂತೆ ಚಡ್ಡಿಯನ್ನು ಬಿಗಿ ಹಿಡಿದುಕೊಂಡು ಒಂದೇ ಸಮನೆ ಓಡುವುದು. ಚೆಂಡು ಸಿಕ್ಕಾಗ ಚೆಂಡು, ಇಲ್ಲವೇ duster ಅದು ಇಲ್ಲವಾ, ಒಂದು ಸಣ್ಣ ಕಲ್ಲನ್ನು ಹಾಳೆಯ ಮುದ್ದೆಯಲ್ಲಿ ಸುತ್ತಿ ಚೆಂಡು ತಯಾರಿಸಿದಾಗ Business Continuity Plan, Emergency handling ಅಂದರೆ ಗೊತ್ತಾಗುತ್ತಿತ್ತಾ. 


ಈ ಅಂಕಣದ ಮುಖ್ಯ ಉದ್ದೇಶ ಮರೆಯಾಗುತ್ತಿರುವ ಕ್ರೀಡಾ ಮನೋಭಾವ. ಸಣ್ಣವರಿದ್ದಾಗ ನಾವು ಎಲ್ಲಾ ಸಣ್ಣಾನೆ ಇದ್ವಿ, ಈಗ ಸ್ವಲ್ಪ ತೂಕ ಜಾಸ್ತಿ ಆಗಿದೆ, ದೇಹಕ್ಕೂ ಹಾಗು .... 😬


ನಿಮ್ಮ ಯಾವ ಆಟ ನಿಮ್ಮನ್ನು ಹೇಗೆ ಪಜೀತಿಗೆ ಸಿಕ್ಕಿಸಿ ಈಗ ನೀವು ಅದನ್ನು ನೆನೆದು ಮನಸಾರೆ ನಕ್ಕು ನಲಿಯುವಿರಿ,

ಕೆಳಗೆ ನಮೂದಿಸಿ 


TBC.....